ಸಾವಿರಾರು ಜನರಿಗೆ ಉದ್ಯೋಗ ಮತ್ತು ಅನ್ನ ನೀಡುತ್ತಿರುವ ಸರಕಾರಿ ಮಲ್ಪೆ ಬಂದರು, ಕೆಲ ಬಲಾಡ್ಯರ ಗೂಂಡಾ ಪ್ರಭಾವಕ್ಕೆ ಒಳಗಾಗುತ್ತಿರುವುದೇ ಎಂಬ ಗಂಭೀರ ಅನುಮಾನ ಮೂಡುತ್ತಿದೆ. ಉಳಿದವರಿಗೆ ಒಂದು ಕಾನೂನು ಇದ್ದರೆ, ಬಂದರಿನ ಒಳಗೆ ಮಾತ್ರ ಮಾಲಿಕರು ತಾವೇ ನ್ಯಾಯ ತೀರಿಸುವ ತಮ್ಮದೇ ರೀತಿಯ ಪರಿಪಾಠ ಬೆಳೆಸಿಕೊಂಡಿರುವಂತ ಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕಳೆದ ವರ್ಷ ಬಂದರಿನೊಳಗೆ ಕೂಲಿ ಕೆಲಸ ಮಾಡುತ್ತಿದ್ದ ಬಡ ಮಹಿಳಾ ಕಾರ್ಮಿಕಳನ್ನು ಮರಕ್ಕೆ ಕಟ್ಟಿ ಥಳಿಸಿದ ಅಮಾನುಷ ಘಟನೆ ಇನ್ನೂ ಜನಮನದಲ್ಲಿ ಮಾಸುವ ಮೊದಲೇ, ಇದೀಗ ಮೀನು ಏಲಂ ಕೆಲಸ ಮಾಡುತ್ತಿದ್ದ ಶೇಖ್ ಅಯ್ಯೂಬ್ ಅವರ ಮೇಲೆ ಬಂದರಿನ ಒಳಗೇ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಪುನರಾವರ್ತನೆಯಾಗಿದೆ.
ಈ ರೀತಿಯ ಘಟನೆಗಳಿಗೆ ಮುಖ್ಯ ಕಾರಣ ಕಾನೂನಿನ ಭಯವಿಲ್ಲದ ಮನೋಭಾವ ಮತ್ತು “ಏನೂ ಮಾಡಿದರೂ ನಮ್ಮ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ” ಎನ್ನುವ ಅಹಂಕಾರವೇ ಆಗಿದೆ. ಮಲ್ಪೆ ಬಂದರಿನಲ್ಲಿ ನಡೆಯುವ ಬಹುತೇಕ ಪ್ರಕರಣಗಳು ಪೋಲೀಸ್ ಠಾಣೆ ಮಟ್ಟಕ್ಕೆ ತಲುಪುವುದೇ ಇಲ್ಲ. ಒಂದು ವೇಳೆ ಪ್ರಕರಣಗಳು ಠಾಣೆಗೆ ತಲುಪಿದರೂ, ಸಂತ್ರಸ್ತರನ್ನು ಹೆದರಿಸಿ-ಬೆದರಿಸಿ ಕೇಸು ಹಿಂಪಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದಕ್ಕೆ ಸಾಕ್ಷಿಯಂತೆ, ಬಂದರಿನೊಳಗೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ, ರಾಜಕೀಯ ಜನಪ್ರತಿನಿಧಿಯೇ ಮುಂದಾಗಿ ಮೆರವಣಿಗೆ ನಡೆಸಿ, ಸಂತ್ರಸ್ತ ಮಹಿಳೆಯಿಂದಲೇ ಕೇಸು ವಾಪಾಸು ಪಡೆಯುವಂತೆ ಮನವಿ ಸಲ್ಲಿಸಿದ ಘಟನೆ ಸಾರ್ವಜನಿಕವಾಗಿ ನಡೆದಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.
“ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬ ಸ್ಥಿತಿ ನಿರ್ಮಾಣವಾದರೆ, ಹೊಟ್ಟೆಪಾಡಿಗಾಗಿ ಮಲ್ಪೆ ಬಂದರಿನಲ್ಲಿ ದುಡಿಯುವ ಸಾವಿರಾರು ಕೂಲಿ ಕಾರ್ಮಿಕರ ಭವಿಷ್ಯವೇನು ಎಂಬ ಪ್ರಶ್ನೆ ಎದುರಾಗುತ್ತದೆ.
ಹೀಗಾಗಿ, ಮಲ್ಪೆ ಬಂದರಿನೊಳಗೆ ನಿರಂತರ ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಿ, ಸಮುದ್ರದಲ್ಲಿಯೂ ಬಂದರಿನಲ್ಲಿಯೂ ಜೀವಪಣವಾಗಿ ದುಡಿಯುವ ಉತ್ತರ ಪ್ರದೇಶ, ಬಿಹಾರ ಹಾಗೂ ಇತರ ಹೊರರಾಜ್ಯಗಳ ಕೂಲಿ ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು. ಅಲ್ಲದೆ, ಹಲ್ಲೆ ನಡೆಸಿದವರ ಮೇಲೆ ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯದೇ ಪ್ರಕರಣ ದಾಖಲಿಸಿ, ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.





