ಖ್ಯಾತ ಲೇಖಕ ಕೆ.ಟಿ. ಹುಸೈನ್ ಬರೆದ ಹಾಗೂ ಅರಫಾ ಮಂಚಿ ಅನುವಾದಿಸಿರುವ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಕೃತಿ ಬುಧವಾರ ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಯಿತು. ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ನಡೆದ ‘ಭಾರತದ ಮುಸ್ಲಿಮರು ಮತ್ತು ಇತಿಹಾಸ’ ವಿಷಯದ ವಿಚಾರಗೋಷ್ಠಿಯಲ್ಲಿ ಕೃತಿಯನ್ನು ಅನಾವರಣಗೊಳಿಸಲಾಯಿತು.
ಯೆನೆಪೊಯ ವಿಶ್ವವಿದ್ಯಾನಿಲಯದ ಸ್ಥಾಪಕ ಉಪಕುಲಪತಿ ಪ್ರೊ. ಸೈಯದ್ ಅಕೀಲ್ ಅಹ್ಮದ್ ವಿಚಾರಗೋಷ್ಠಿಯ ಉದ್ಘಾಟನೆ ನೆರವೇರಿಸಿದರು. ಖ್ಯಾತ ಇತಿಹಾಸ ತಜ್ಞ ಡಾ. ರಾಮ್ ಪುನಿಯಾನಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ರಮನಾಥ ರೈ, ಖಾಝಿ ಎ ಶರೀಅತ್ ಮೌಲಾನಾ ಮುಫ್ತಿ ಶೇಖ್ ಮುತಹ್ಹರ್ ಹುಸೈನ್ ಖಾಸಿಮೀ, ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಮೌಲಾನಾ ಯಯ್ಯಾ ತಂಙಳ್ ಮದನಿ, ಶಾಂತಿ ಪ್ರಕಾಶನ ಟ್ರಸ್ಟ್ನ ಕಾರ್ಯದರ್ಶಿ ಅಬ್ದುಸ್ಸಲಾಮ್ ಯು, ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಸ. ಈದ್ ಇಸ್ಮಾಯಿಲ್, ಕೃತಿ ಅನುವಾದಕ ಅರಫಾ ಮಂಚಿ, ದ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಕರೀಮ್ ಹಾಗೂ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಬೆಂಗರೆ ಮಸ್ಜಿದ್ ಅನಸ್ ಬಿನ್ ಮಾಲಿಕ್ ಖತೀಬ್ ಅಬ್ದುಲ್ ಲತೀಫ್ ಆಲಿ ಕಿರಾಅತ್ ಪಠಿಸಿದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮವನ್ನು ನಿರೂಪಿಸಿದರು.






