ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಎಂಬ ಗ್ರಾಮದಲ್ಲಿ ಮಹಾ ಮಾನವತಾವಾದಿ ಬಸವಣ್ಣವರಿಗೆ ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿದ ಹರಳಯ್ಯನವರ ಪತ್ನಿ ಕಲ್ಯಾಣಮ್ಮನವರ ಐಕ್ಯಸ್ಥಳವು ದುಸ್ಥಿತಿಗೆ ಬಂದು ತಲುಪಿದೆ. ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಸಿದಿರುವದು ವಿಪರ್ಯಾಸ. ಶರಣೆ ಕಲ್ಯಾಣಮ್ಮಳ ಬಸವ ಭಕ್ತಿ, ಕಾಯಕದ ಬಗೆಗಿನ ಅವರ ಒಲವು ಮತ್ತು ಶರಣರ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಉಳಿಸಿಕೊಂಡು ಹೋಗುವುದು ಅವಶ್ಯವಾಗಿದೆ.
ಮೂಲತಃ ಗುಲ್ಬರ್ಗ ಜಿಲ್ಲೆ ಶಹಾಪೂರ ತಾಲೂಕಿನ ಸಗರ ಎಂಬ ಗ್ರಾಮದಲ್ಲಿ ತಮ್ಮ ಕುಲಕಸುಬು ಪಾದರಕ್ಷೆ ತಯಾರಿಸುವ ಕಾಯಕ ಮಾಡಿಕೊಂಡಿದ್ದ ಶರಣರಾದ ಹರಳಯ್ಯ ಮತ್ತು ಕಲ್ಯಾಣಮ್ಮ ಶರಣ ದಂಪತಿಗಳು ಬಸವಣ್ಣನವರ ಸಾಮಾಜಿಕ ಕ್ರಾಂತಿ, ಕಾಯಕದ ಬಗೆಗಿನ ಗೌರವ ಬಸವಣ್ಣನವರಿದ್ದ ಕಲ್ಯಾಣದ ಕಡೆಗೆ ಇವರನ್ನು ಸೆಳೆಯುವಂತೆ ಮಾಡಿತ್ತು. 12 ನೇಯ ಶತಮಾನದಲ್ಲಿ ಪಾದರಕ್ಷೆ ತಯಾರಿಸುವ ಕಸುಬು ಮಾಡುವವರನ್ನು ಕೀಳಾಗಿ ಕಾಣುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಳವರ್ಗದ ಜನರಮೇಲಿನ ಬಸವಣ್ಣನವರ ಕಾಳಜಿ ಮತ್ತು ಪ್ರೀತಿ ಬಸವಣ್ಣನವರ ಮೇಲಿನ ಗೌರವವನ್ನು ಹೆಚ್ಚಿಸುವಂತೆ ಮಾಡಿತ್ತು.
ತಾವು ಒಂದು ಸಾರಿ ಬಸವಣ್ಣನವರನ್ನು ಭೇಟಿ ಮಾಡಬೇಕೆಂಬ ಬಯಕೆಯು ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳನ್ನು ಕಲ್ಯಾಣದ ಕಡೆ ಮುಖಮಾಡುವಂತೆ ಮಾಡಿತು. ಈ ಸಂದರ್ಭದಲ್ಲಿ ಕೆಳವರ್ಗದ ಕುಲ ಕಸುಬು ಮಾಡುತ್ತಿದ್ದ ಜನರು ಬಸವಣ್ಣವರ ದಲಿತ, ದಮನಿತರ ಮೇಲಿನ ಪ್ರೀತಿಯ ಕುರಿತು ಮಾತನಾಡುತ್ತಿದ್ದ ಮಾತುಗಳನ್ನು ಕೇಳಿ ಈ ದಂಪತಿಗಳು ಆನಂದಭರಿತರಾಗುತ್ತಾರೆ. ಒಂದು ದಿನ ಹರಳಯ್ಯನವರು ಕಲ್ಯಾಣ ಪಟ್ಟಣದ ಬಿದಿಯಲ್ಲಿ ಪಾದರಕ್ಷೆ ಮಾರುತ್ತ ಹೊರಟಾಗ ಹರಳಯ್ಯನವರಿಗೆ ಬಸವಣ್ಣನವರು ಎದುರಾಗುತ್ತಾರೆ. ಬವಣ್ಣನವರನ್ನು ಕಂಡ ಹರಳಯ್ಯನವರು ಶರಣು ತಂದೆ ಎಂದು ಕೈ ಮುಗಿದಾಗ ಬಸವಣ್ಣನವರು ಬಾಗಿದ ತಲೆ ಮುಗಿದ ಕೈಯಾಗಿರಿಸು ಕೂಡಲಸಂಗಮದೇವ ಎಂಬಂತೆ; ಶರಣು ಶರಾಣಾರ್ಥಿಗಳು ಮಹಾಶರಣ ಹರಳಯ್ಯನವರಿಗೆ ಎಂದು ಕೈ ಮುಗಿಯುತ್ತಾರೆ.

ಇದರ ಪರಿಣಾಮ ಹರಳಯ್ಯನವರಿಗೆ ಸಂತೋಷದ ಜೊತೆಗೆ ದಿಕ್ಕು ತೋಚದಂತೆ ಆಗುತ್ತದೆ. ಕಾರಣ ಪಾದರಕ್ಷೆ ತಯಾರಿಸುವ ನಮ್ಮನ್ನು ಜನ ಮಾತನಾಡಿಸಲೂ ಹಿಂದೇಟು ಹಾಕುವ ಸಂದರ್ಭದಲ್ಲಿ ಬಿಜ್ಜಳ ಆಸ್ಥಾನದಲ್ಲಿ ಪ್ರಧಾನಿಮಂತ್ರಿ ಆಗಿರುವ ಬಸವಣ್ಣನವರು ಎರಡು ಬಾರಿ ಶರಣು ಎಂದು ಹೇಳಿ ದೊಡ್ಡ ಹೊರೆಯನ್ನು ನನ್ನ ಮೇಲೆ ಹೊರೆಸಿದರು ಎಂದು ಚಿಂತಾಕ್ರಾಂತರಾಗಿ ಪತ್ನಿ ಕಲ್ಯಾಣಮ್ಮಳಿಗೆ ನಡೆದ ಘಟನೆಯನ್ನು ವಿವರಿಸಿದಾಗ ಕಲ್ಯಾಣಮ್ಮ ನಮ್ಮ ತೊಡೆ ಚರ್ಮದಿಂದ ಬಸವಣ್ಣವರಿಗೆ ಪಾದರಕ್ಷೆ ತಯಾರಿಸಿ ಬಸವಣ್ಣನವರು ನಮ್ಮ ಮೇಲೆ ಹಾಕಿರುವ ಶರಣಾರ್ಥಿಯ ಭಾರವನ್ನು ಕಡಿಮೆ ಮಾಡಿಕೊಳ್ಳೊಣ ಎಂದು ಸಲಹೆ ನೀಡುತ್ತಾರೆ.
ಹರಳಯ್ಯನವರು ತಮ್ಮ ಬಲ ತೊಡೆಯ ಚರ್ಮ, ಕಲ್ಯಾಣಮ್ಮ ತಮ್ಮ ಎಡ ತೊಡೆಯ ಚರ್ಮದಿಂದಲೂ ಚೆಂದದ ಚಮ್ಮಾವುಗೆ (ಪಾದರಕ್ಷೆ) ತಯಾರಿಸಿ ಬಸವಣ್ಣವರಿಗೆ ನೀಡಲು ಬಂದಾಗ ಬಸವಣ್ಣನವರು ಈ ಶರಣ ದಂಪತಿಗಳ ಶರಣ ಭಕ್ತಿಗೆ ಆನಂದಭರಿತರಾದರಲ್ಲದೆ ಅವುಗಳನ್ನು ಮೆಟ್ಟದೆ ತಮ್ಮ ತಲೆಯ ಮೇಲಿಟ್ಟುಕೊಂಡು ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು ಸರಿಯಲ್ಲಾ ನೋಡಾ ಕೂಡಲಸಂಗಮದೇವಾ ನಿಮ್ಮ ಶರಣರ ಚಮ್ಮಾವುಗೆಗೆ ಎಂದು ಇಂತಹ ಪವಿತ್ರ ಶರಣರ ಚರ್ಮದಿಂದ ತಯಾರಿಸಿದ ಪಾದರಕ್ಷೆ ತೊಡಲು ನಾನು ಯೋಗ್ಯನಲ್ಲ ಎಂದು ಹೇಳಿ ಕಳುಹಿಸುತ್ತಾರೆ.
ಈ ಸುದ್ದಿ ಓದಿದ್ದೀರಾ?: ‘ಬೆಳಗಾವಿ ಜಿಲ್ಲಾ ವಿಭಜನೆ ಯಾಕ್ ಮಾಡವಲ್ರಿ?’; ಜಿಲ್ಲೆಯ ಜನರು ಹೇಳ್ತಿರೋದೇನು ಗೊತ್ತೇ?
ನಂತರ ದಾರಿಯಲ್ಲಿ ಮಧುವರಸ ಹರಳಯ್ಯ ದಂಪತಿಗಳು ತಯಾರಿಸಿದ ಪಾದರಕ್ಷೆಗಳನ್ನು ಕಿತ್ತುಕೊಂಡು ಧರಿಸಿದ ಮರುಕ್ಷಣ ಮಧುವರಸನ ಮೈಯ್ಯಲ್ಲಾ ಉರಿಯತ್ತೊಡಗಿತು ಯಾವುದೆ ವೈದ್ಯ ಪಂಡಿತರಿಂದ ನೋವು ಕಡಿಮೆಯಾಗದೆ ಇದ್ದಾಗ; ಹರಳಯ್ಯನವರು ಪಾದರಕ್ಷೆ ತಯಾರಿಸುವ ಕರಿಬಾನಿಯ ನೀರನ್ನು ಮಧುವರಸನ ಮೈಗೆ ಚಿಮುಕಿಸಿದಾಗ ನೋವು ಶಮನವಾಗುತ್ತದೆ. ಜಾತಿ ಸಂಕರವಾದ ಬಳಿಕ ಕುಲವನರಸುವರೆ? ಎಂದು ಬಸವಣ್ಣನವರು ಪ್ರಶ್ನಿಸುವಂತೆ ಮಧುವರಸನ ಮನಪರಿವರ್ತನೆಯಾಗಿ ಮಗಳು ಲಾವಣ್ಯವತಿ ಮತ್ತು ಹರಳಯ್ಯನ ಮಗ ಶೀಲವಂತ ಇವರಿಬ್ಬರು ಪರಸ್ಪರ ಒಪ್ಪಿಕೊಂಡ ಲಿಂಗವಂತರ ಮದುವೆಯಾಗಿರುತ್ತದೆ. ಇದು ವೈದಿಕರ ದೃಷ್ಠಿಯಲ್ಲಿ ಪ್ರತಿಲೋಮ ಪದ್ದತಿಯಾಗಿತ್ತು. ಹೀಗಾಗಿ ಇದನ್ನು ಅಂತರ್ಜಾತಿ ವಿವಾಹವೆಂದು ಹೇಳಿ ಕಲ್ಯಾಣದಲ್ಲಿ ಕ್ರಾಂತಿ ನಡೆದು ಶರಣರ ಹತ್ಯಾಕಾಂಡವೆ ನಡೆಯಲು ಕಾರಣವಾಯಿತು.

ಇದರ ಪರಿಣಾಮ; ಈ ವಿವಾಹಕ್ಕೆ ಕಾರಣರಾಗಿದ್ದ ಮಧುವರಸ ಮತ್ತು ಹರಳಯ್ಯನವರ ಕಣ್ಣು ಕೀಳಿಸಿ ಎಳೆ ಹೂಟೆ ಶಿಕ್ಷೆ ನೀಡಿಸುತ್ತಾರೆ. ಇದರಿಂದ ಕಲ್ಯಾಣದಲ್ಲಿ ಶರಣರ ಹತ್ಯೆಗಳು ನಡೆದು ಇಡೀ ಕಲ್ಯಾಣದ ರಸ್ತೆಗಳು ರಕ್ತಮಯವಾಗುತ್ತವೆ. ಶಾಂತಿಯ ಧಾಮದಂತೆ ಇದ್ದ ಕಲ್ಯಾಣ ಅಲ್ಲೋಲ ಕಲ್ಲೋಲವಾಗಿ ಅಲ್ಲಿಂದ ಶರಣರು ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ವಚನಗಳ ರಕ್ಷಣೆಗೆ ಕಲ್ಯಾಣದಿಂದ ಹೊರನಡೆದರು. ಹೀಗೆ ಕಲ್ಯಾಣ ಕ್ರಾಂತಿಯಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಶರಣೆ ಕಲ್ಯಾಣಮ್ಮ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಐಕ್ಯರಾಗುತ್ತಾರೆ. ಇಂದು ಆ ಐಕ್ಯಸ್ಥಳವು ದುಸ್ಥಿತಿಯಲ್ಲಿರುವದು ವಿಷಾದನಿಯ ಸಂಗತಿಯಾಗಿದೆ. ಏಕೆಂದರೆ ಅಚ್ಚಗನ್ನಡದ ಬೇಸಾಯಗಾರರು ಎಂಬಂತೆ ಜಾತಿ, ವರ್ಣ, ಲಿಂಗಭೇದದ ವಿರುದ್ಧ ಹೊಸ ಧರ್ಮವನ್ನು ಕಟ್ಟಿ ಸರ್ವರಿಗೂ ಸಮಪಾಲು ನೀಡುವಲ್ಲಿ ಯಶಸ್ವಿಗಳಾದ ಶರಣರ ಇತಿಹಾಸ ನೆನಪಿಸುವ ಸ್ಥಳ ಈ ಗ್ರಾಮದಲ್ಲಿರುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ಸಂಗತಿಯೆ ಸರಿ.
ಈ ತಿಗಡಿ ಗ್ರಾಮವು ಬೈಲಹೊಂಗಲ ತಾಲೂಕಿನ ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಹಿಂದಿನ ಬಿಜೆಪಿ ಶಾಸಕರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸದ್ಯ ಕಿತ್ತೂರು ಶಾಸಕರಾಗಿರುವ ಬಾಬಾಸಾಹೇಬ ಪಾಟೀಲ್ ಅವರ ಗಮನಕ್ಕೆ ತರಲಾಗಿದ್ದು ಇಂತಹ ತ್ಯಾಗ ಮನೋಭಾವವುಳ್ಳ ಶರಣೆ ಕಲ್ಯಾಣಮ್ಮನವರ ಐಕ್ಯ ಸ್ಥಳವನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ಧಾರೆ. 12 ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ ಮತ್ತು ಜಾತಿಯತೆಯ ವಿರುದ್ಧ ನಡೆದ ಕಲ್ಯಾಣ ಕ್ರಾಂತಿಯು ನಿಜಕ್ಕೂ ಐತಿಹಾಸಿಕವಾದದ್ದು. ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಹೋರಾಡಿದ ಶರಣೆ ಕಲ್ಯಾಣಮ್ಮನ ಐಕ್ಯ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಇನ್ನಾದರೂ ಶರಣೆ ಕಲ್ಯಾಣಮ್ಮನವರ ಪುಣ್ಯಕ್ಷೇತ್ರವನ್ನು ಅಭಿವೃದ್ಧಿಗೊಳಿಸುವರೊ ಕಾದು ನೋಡಬೇಕಿದೆ.




