ಕರ್ನಾಟಕದ ಮೇಲೆ ಆರ್ಥಿಕ ದೌರ್ಜನ್ಯ ಎಸಗಿರುವ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ 1.87 ಲಕ್ಷ ಕೋಟಿ ತೆರಿಗೆ ಹಣ ನೀಡುವಂತೆ ಅಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್ಎಸ್ಯುಐ)ದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ 2017-18ರಿಂದ ಜಿಎಸ್ಟಿ ತೆರಿಗೆ ಹಣ ಕೊಡದೆ ದೌರ್ಜನ್ಯ ಎಸಗುತ್ತಿದೆ.
ಈವರೆಗೂ ರಾಜ್ಯಕ್ಕೆ 1.87 ಲಕ್ಷ ಕೋಟಿ ಜಿಎಸ್ಟಿ ಹಣ ಕೊಡಬೇಕಿದ್ದು, ಇದನ್ನೂ ಕೊಟ್ಟಿರುವುದಿಲ್ಲ. ಬರ ಪರಿಹಾರಕ್ಕೆ ರಾಜ್ಯ ಸರ್ಕಾರ 18.77 ಕೋಟಿ ರೂಪಾಯಿ ಬೇಡಿಕೆ ಸಲ್ಲಿಸಿದರೂ ಕೂಡ ಈವರೆಗೆ ಬಿಡಿಗಾಸು ಪರಿಹಾರದ ಹಣ ನೀಡಿಲ್ಲ. ತೆರಿಗೆ ಪಾಲಿನಲ್ಲಿ ತಾರತಮ್ಯ ಅನುಸರಿಸುತ್ತಿದ್ದು, ಶೇ 4.77ರಿಂದ ಶೇ3.64ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ₹62,098 ಕೋಟಿ ನಷ್ಟವಾಗಿದೆ” ಎಂದು ಆರೋಪಿಸಿದರು.

“ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ಘೋಶಿಸಿದ್ದು, ಯೋಜನೆಗೆ ₹5,300 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಒಂದು ರೂಪಾಯಿಯ ಅನುದಾನವನ್ನು ನೀಡಿಲ್ಲ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿದ್ದರೂ ಕೂಡ ಈವರೆಗೆ ಬಿಡಿಗಾಸನ್ನೂ ಕೊಟ್ಟಿರುವುದಿಲ್ಲ. ಸಹಾಭಾಗಿತ್ವ ಯೋಜನೆಗೆ 2021ನೇ ಸಾಲಿನಲ್ಲಿ ₹20,000 ಕೋಟಿ ಇದ್ದುದ್ದನ್ನು 2022-23ನೇ ಸಾಲಿನಲ್ಲಿ ₹13,000 ಕೋಟಿಗೆ ಕಡಿತಗೊಳಿಸಿದೆ. ಏಮ್ಸ್, ಮಹದಾಯಿ ಯೋಜನೆಗೆ ಮನ್ನಣೆ ನೀಡದೆ ಕನಸಾಗಿಯೇ ಉಳಿಯುವಂತೆ ಮಾಡಿದೆ” ಎಂದರು.

“ಕೇಂದ್ರ ಸರ್ಕಾರ ಕನ್ನಡಿಗರಿಗೆ ಕರ್ನಾಟಕಕ್ಕೆ ಎಸಗುತ್ತಿರುವ ಆರ್ಥಿಕ ದೌರ್ಜನ್ಯವಾಗಿದ್ದು, ರಾಜ್ಯದ ಮೇಲೆ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಹಣವನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ತನ್ನ ನೀತಿ ಬದಲಾಯಿಸಬೇಕು. ರಾಜ್ಯಕ್ಕೆ ಬರಬೇಕಾದ 1.87 ಲಕ್ಷ ಕೋಟಿ ತೆರಿಗೆ ಹಣವನ್ನು ಕೂಡಲೇ ನೀಡಬೇಕು” ಎಂದು ಅಗ್ರಹಿಸಿದರು.
ಮಹಾನಗರ ಪಾಲಿಕೆ ಸದಸ್ಯ ರಮೇಶ್ ಹೆಗಡೆ ಮಾತನಾಡಿ, “ಕೇಂದ್ರದ ಧೋರಣೆಗೆ ನಮ್ಮ ಧಿಕ್ಕಾರ. ಹಾಗೆಯೇ ಇದು ಮೋದಿ ಸರ್ಕಾರವಷ್ಟೇ ಅಲ್ಲ, ಮೋದಾನಿ ಸರ್ಕಾರ. ಮೋದಾನಿ ಅಂದರೆ ಮೋದಿ, ಅದಾನಿ, ಅಂಬಾನಿ ಅವರನ್ನು ಅಭಿವೃದ್ಧಿ ಮಾಡಲಿರುವ ಭ್ರಷ್ಟ ಸರ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಶಿವಮೊಗ್ಗ ನಗರದ ಮಾಜಿ ಶಾಸಕ ಈಶ್ವರಪ್ಪ ಅವರಿಗೆ ನಾಚಿಕೆ ಆಗಬೇಕು. ಶಿವಮೊಗ್ಗದಲ್ಲಿ ಗೋಮಾತೆ ತಂದು ಪ್ರತಿಭಟನೆ ಮಾಡುತ್ತೀರಾ, ನಿಮ್ಮದೇ ಎಂ ಪಿ ರಾಜೀವ್ ಚಂದ್ರಶೇಖರ ಒಡೆತನ ಅತಿ ಹೆಚ್ಚು ಗೊಮಾಂಸ ರಫ್ತು ಮಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಅತಿ ಹೆಚ್ಚು ಗೊಮಾಂಸ ರಫ್ತು ಮಾಡುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಿ ಈ ರೀತಿ ನಾಟಕ ಮಾಡಬೇಡಿ” ಎಂದರು.
“ಸಂಸದ ರಾಘವೇಂದ್ರ ಅವರೇ ಸಂಸತ್ ಅಧಿವೇಶನದಲ್ಲಿ ಎಷ್ಟು ಬಾರಿ ಸರ್ಕಾರ ಪ್ರಶ್ನಿಸಿದ್ದೀರಾ ತಿಳಿಸಿ, ಹಾಗೆ ವಿಐಎಸ್ಎಲ್ಗೆ ಎಷ್ಟು ಅನುದಾನ ತಂದಿದ್ದೀರಾ, ಯಾವಾಗ ಪ್ರಾರಂಭ ಮಾಡುತ್ತೀರಾ?. ನಿಮಗೆ ಎಷ್ಟು ಕಾಳಜಿ ಇದೆ ತಿಳಿಸಿ. ಹಾಗೆಯೇ ಕೇಂದ್ರದ ಧೋರಣೆ ಬಗ್ಗೆ ಎಷ್ಟು ಬಾರಿ ಧ್ವನಿ ಎತ್ತಿದ್ದೀರ ಹೇಳಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ರಮೇಶ್ ಹೆಗಡೆ ಅವರೇ ನೀವು ಪ್ರಶ್ನಿಸಿದರೆ ಐ.ಟಿ, ಇ.ಡಿ ದುರುಪಯೋಗ ಪಡಿಸಿಕೊಂಡು ಹೆದರಿಸುವ ಪ್ರಯತ್ನ ಮಾಡುತ್ತೀರಾ. ಇದು ಎಷ್ಟು ದಿವಸ ನಡೆಯುತ್ತದೆ. ಪ್ರತಿಯೊಬ್ಬರಿಗೂ ಅವಕಾಶ ಬಂದೇ ಬರುತ್ತದೆ. ನೆನಪಲ್ಲಿ ಇಟ್ಟುಕೊಳ್ಳಿ. ಇದೇ ಐ.ಟಿ, ಇ.ಡಿ ಅಧಿಕಾರಿಗಳು ನಾಳೆ ನಿಮ್ಮ ಮನೆ ಬಾಗಲಿಗೂ ಬರುವ ಸಮಯ ಹತ್ತಿರವಿದೆ. ನಿಮ್ಮ ಅಧಿಕಾರ ದುರುಪಯೋಗಕ್ಕೆ ನಾವು ಬಗ್ಗುವುದಿಲ್ಲ. ಇದು ನಮ್ಮ ಹಕ್ಕು ನಾವು ಕೇಳುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರಿ ವಸತಿ ಶಾಲೆಯಲ್ಲಿ ರ್ಯಾಗಿಂಗ್; ವಿದ್ಯಾರ್ಥಿಗಳ ಮರ್ಮಾಂಗಕ್ಕೆ ಗಾಯ
“ಎನ್ಎಸ್ಯುಐ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಮುಂದಾದಾಗ, ನೂಕು ನುಗ್ಗಲು ಸಂಭವಿಸಿದ್ದು, ಪೊಲೀಸ್ ಬ್ಯಾರಿಕೇಡ್ಗಳನ್ನು ತಳ್ಳಿ ಮುಂದೆ ಬರಲು ಪ್ರಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಪೊಲೀಸರು ಬಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಎನ್ಎಸ್ಯುಐ ಅಧ್ಯಕ್ಷ ವಿಜಯ್ ಕುಮಾರ್, ರಮೇಶ್ ಹೆಗಡೆ, ಕಲೀಮ್ ಪಾಶ, ಚೇತನ್, ಮಧುಸೂದನ್, ಸುಡೂರ್ ಶಿವಣ್ಣ, ಶಿವಕುಮಾರ್, ರವಿಕುಮಾರ್ ಸೇರಿದಂತೆ ಇತರರು ಇದ್ದರು.





