ಶಿವಮೊಗ್ಗ, ಶರಾವತಿ ಎಜುಕೇಶನ್ ಟ್ರಸ್ಟ್ ಮೂಲಕ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬಡವರ ಮಕ್ಕಳು ಶಾಲೆ ಕಲಿಯಬೇಕೆಂಬ ಹಠ ತೊಟ್ಟು ಬೆಳೆಸಿದ್ದಾರೆ. ಅವರ ಮಹದಾಸೆಯಂತೆ ಮಲೆನಾಡು ಪ್ರೌಢಶಾಲೆ ಹೆಸರಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಹತ್ತು ಶಾಲೆಗಳನ್ನು ಸಂಸ್ಥೆ ನಡೆಸುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಶನಿವಾರ ಶರಾವತಿ ಎಜುಕೇಷನ್ ಟ್ರಸ್ಟ್ನ ಆಧುನಿಕ ಸಭಾಂಗಣ ಉದ್ಘಾಟನೆ ಮತ್ತು ಸಂಸ್ಥೆಯ ರಜತಮಹೋತ್ಸವದಲ್ಲಿ ಅವರು ಮಾತನಾಡಿದರು.
ಮಲೆನಾಡಿನ ಕುಗ್ರಾಮಗಳ ಮಕ್ಕಳ ಎದೆಗೆ ಅಕ್ಷರ ಬಿತ್ತಬೇಕೆಂಬ ಉದ್ದೇಶದಿಂದ ಈ ಸಂಸ್ಥೆಗಳನ್ನು ಆರಂಬಿಸಿ ಕ್ರಮೇಣ ಅವರು ಸರ್ಕಾರದ ವೇತನಾನುದಾನಕ್ಕೆ ಒಳಪಟ್ಟಿವೆ. ಈಗ ಆ ಶಾಲೆಗಳು ಉತ್ತಮ ಶಿಕ್ಷಣ ಕೇಂದ್ರಗಳಾಗಿವೆ.
ತಂದೆಯವರ ಮತ್ತೊಂದು ಕನಸು ಶರಾವತಿ ಡೆಂಟಲ್ ಕಾಲೇಜನ್ನು ಸಂಬಳ ಕೊಡಲಿಕ್ಕೆ ಹಣ ಇಲ್ಲದಾಗ ಆಕಾಶ್ ಆಡಿಯೊ ಮೂಲಕ ಕೊಟ್ಟು ಕಷ್ಟ ಕಾಲದಲ್ಲಿ ಸಂಸ್ಥೆ ಬೆಳೆಸಿದ್ದೇವೆ.
ಇಂದು ಪಿಜಿ ಸೆಂಟರ್ ಹಾಗೂ ಮಲೆನಾಡು ಇಂಟರ್ ನ್ಯಾಷನಲ್ ಶಾಲೆ ಸೇರಿದಂತೆ ಹಲವು ಶಿಕ್ಷಣ ಶಾಖೆಗಳು ಇಲ್ಲಿವೆ. ಈ ಎಲ್ಲಾ ಸಂಸ್ಥೆ ಬೆಳೆಯುವಲ್ಲಿ ಭೀಮಣ್ಣ ನಾಯ್ಕ ಅವರ ಶ್ರಮ ದೊಡ್ಡದಿದೆ ಎಂದು ಹೇಳಿದರು.
ಮುಂದೆ ಆಸ್ಪತ್ರೆ ತೆರೆಯುವ ಸಂಸ್ಥೆ ಕನಸು ಈಡೇರಲಿ, ಬಡವರ ಪರವಾದ ಬಂಗಾರಪ್ಪ ಅವರ ಕೆಲಸ ಅಜರಾಮರ. ಗುಣಮಟ್ಟ ಚೆನ್ನಾಗಿದೆ. ಇಲ್ಲಿನ ಅಧ್ಯಾಪಕ ಮತ್ತು ಸಿಬ್ಬಂದಿ ಸೇವೆ ದೊಡ್ಡದಿದೆ. ಇಲ್ಲಿ ವಿದ್ಯಾರ್ಥಿಗಳೇ ನಮಗೆ ರಾಯಭಾರಿಗಳು, ಅವರಿಂದಾಗಿ ಪ್ರತಿವರ್ಷ ಉತ್ತಮ ದಾಖಲಾತಿ ಆಗುತ್ತಿದೆ ಎಂದು ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.





