ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೆ, ಕೇಳಿದ ಸ್ಥಳಕ್ಕೆ ಟಿಕೆಟ್ ನೀಡದೆ ಸಾರ್ವಜನಿಕರ ಮೇಲೆ ಕೆಎಸ್ಆರ್ಟಿಸಿ ಬಸ್ (ಸಂಖ್ಯೆ: ಕೆಎ-42 ಎಫ್-2005) ಚಾಲಕ ಹಾಗೂ ನಿರ್ವಾಹಕರು ದರ್ಪ ತೋರಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಪ್ರಯಾಣಿಕರೊಬ್ಬರಿಗೆ ಭದ್ರಾವತಿ ಬದಲು ಹಾಲಿನ ಡೈರಿ ಸ್ಟಾಪ್ಗೆ ಟಿಕೆಟ್ ನೀಡಿದ್ದಾರೆ. ʼಎಲ್ಲಿಗೋ ಟಿಕೆಟ್ ಕೇಳಿದರೆ ಇನ್ನೆಲ್ಲಿಗೋ ಟಿಕೆಟ್ ನೀಡುತ್ತೀರಿ, ಚೆಕಿಂಗ್ ಬಂದರೆ ನಾನು ದಂಡ ಕಟ್ಟಬೇಕು ಪ್ರಯಾಣಿಕ ಸಿಟ್ಟಾದಾಗ, ನೀನು ಡೈರಿ ಬಂದಾಗ ಪುನಃ ಭದ್ರಾವತಿಗೆ ಟಿಕೆಟ್ ತಗೊ ಎಂದು ಕಂಡಕ್ಟರ್ ಉಡಾಫೆಯಾಗಿ ಮಾತನಾಡಿದ್ದಾರೆ. ಇದರಿಂದ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದಿದೆ.
ಅದೇ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಈದಿನ ಮಾಧ್ಯಮ ಪ್ರತಿನಿಧಿ ‘ಅವಾಗಿನಿಂದಲೂ ಯಾಕೆ ಹೀಗೆ ಪ್ರಯಾಣಿಕರಿಗೆ ತೊಂದರೆ ಮಾಡ್ತಿದ್ದೀರಿʼ ಎಂದು ಪ್ರಶ್ನೆ ಮಾಡಿದ್ದಕ್ಕೆ ಕುಪಿತಗೊಂಡ ಬಸ್ ನಿರ್ವಾಹಕ, ನೀನು ಯಾವ ಸ್ಟಾಪ್, ಎಲ್ಲಿ ಇಳಿಬೇಕು ಅಲ್ಲಿ ಇಳಿ, ಬೇರೆ ಅವರ ಉಸಾಬರಿ ನಿನಗೆ ಏನಕ್ಕೆ? ನೀನು ಯಾವನು ಕೇಳುವುದಕ್ಕೆ, ಅವರ ಅವರ ಹಣೆಬರಹ ನಡೆದುಕೊಂಡು ಹೋಗುತ್ತಾರೆ ಅವರಿಗೆ ನಡೆಯೋ ಶಕ್ತಿ ಇದೆ. ನನ್ನ ಕೆಲಸ ಮಾಡೋದ್ ನನಗೆ ಗೊತ್ತಿದೆ. ಅನವಶ್ಯಕ ಮಾತಾಡಬೇಡ ಎಂದೆಲ್ಲಾ ನಿಂದಿಸಿದ್ದಾರೆ.
ರಾತ್ರಿ ಸಮಯದಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿನಿಯರು, ವಯಸ್ಸಾದವರು ಬಸ್ಗಳಿಗಾಗಿ ನಿಗದಿತ ಸ್ಟಾಪ್ಗಳಲ್ಲಿ ಕಾಯುತ್ತಿರುತ್ತಾರೆ. ಆದರೆ ಈ ಕೆಎಸ್ಆರ್ಟಿಸಿ ಬಸ್ಗಳು ನಿಲ್ಲಿಸುವುದೇ ಇಲ್ಲ. ಬೆಳಗ್ಗೆ ಸಮಯದಲ್ಲೂ ಹೀಗೇ ಮಾಡುತ್ತಾರೆ. ಒಂದು ಸ್ಥಳಕ್ಕೆ ಟಿಕೆಟ್ ಕೇಳಿದರೆ ಇನ್ಯಾವುದೋ ಸ್ಟಾಪಿಗೆ ಟಿಕೆಟ್ ಕೊಡುತ್ತಾರೆ. ಪ್ರಶ್ನಿಸಿದರೆ ಬಾಯಿಗೆ ಬಂದದ್ದು ಮಾತನಾಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಮದುವೆಯಾಗುವುದಾಗಿ ನಂಬಿಸಿ ವಂಚನೆ; ಮಹಿಳೆಯಿಂದ ₹7 ಲಕ್ಷ ಪೀಕಿಸಿದ ಖದೀಮ
ಶಿವಮೊಗ್ಗ ಕೆಎಸ್ಆರ್ಟಿಸಿಯ ಆಡಳಿತ ಅಧಿಕಾರಿ (ಎಂಡಿ) ಇಂತಹ ಚಾಲಕ, ನಿರ್ವಹಕರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ, ಹಾಗೂ ಸಾಕಷ್ಟು ಬಸ್ ನಿಯೋಜಿಸಿ ಪ್ರಯಾಣಿಕರ ಅನುಕೂಲ ಮಾಡುವಲ್ಲಿ ಮುಂದಿನ ದಿನಗಳಲ್ಲಿ ಏನು ಪರ್ಯಾಯ ವ್ಯವಸ್ಥೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.





