ಶಾಲಾ ಮಕ್ಕಳು ಸೇರಿದಂತೆ 30 ಮಂದಿಯಿದ್ದ ಸ್ಕೂಲ್ ಬಸ್ಸೊಂದು ಶಿವಮೊಗ್ಗದ ಆಗುಂಬೆ ಘಾಟ್ ತಿರುವಿಗೆ ಢಿಕ್ಕಿ ಹೊಡೆದಿದೆ. ಅರ್ಧ ಮುಂದಕ್ಕೆ ಹೋಗಿ ಅಲ್ಲಿಯೇ ನಿಂತಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರಿಗೆ ಹೋಗುತ್ತಿತ್ತು. ಈ ಮಾರ್ಗದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ ಸೂರ್ಯಾಸ್ತಮಾನ ಜಾಗಕ್ಕೂ ಮೊದಲು ಸಿಗುವ ತಿರುವಿನಲ್ಲಿ ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಹೇಮಾವತಿ ನಾಲೆ ಕಳಪೆ ಕಾಮಗಾರಿ ಆರೋಪ; ರೈತರ ಪ್ರತಿಭಟನೆ
ಸ್ಕೂಲ್ ಬಸ್ ಆಗುಂಬೆ ಗೇಟ್ ದಾಟಿಕೊಂಡು ಮುಂದಕ್ಕೆ ಸಾಗಿದೆ. ಅಲ್ಲಿಂದ ತಿರುವಿನಲ್ಲಿ ವೇಗವಾಗಿದ್ದರಿಂದ ಬಸ್ ಕಂಟ್ರೋಲ್ಗೆ ಸಿಗದೇ ತಿರುವಿನಂಚಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ರಭಸಕ್ಕೆ ಬಸ್ನ ಅರ್ಧ ಭಾಗ ಮುಂದಕ್ಕೆ ಹೋಗಿ ನಿಂತಿದೆ. ಒಂದು ವೇಳೆ ಬಸ್ ಸ್ವಲ್ಪ ಕೆಳಗೆ ಜಾರಿದ್ದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಸ್ವಲ್ಪದರಲ್ಲೇ ದೊಡ್ಡ ಅನಾಹುತವೊಂದು ತಪ್ಪಿದೆ.
ಘಟನೆ ಬಳಿಕ ಸ್ಥಳದಲ್ಲಿದ್ದವರು ಬಸ್ನಲ್ಲಿರುವವರನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.





