ಶಿವಮೊಗ್ಗ ನಗರ ಸ್ವಚ್ಛ ನಗರವೆಂದು ಅಂದಿನ ಮೇಯೆರ್ ಸುನಿತಾ ಅಣ್ಣಪ್ಪ ಅವರು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪಡೆದಿದ್ದರು. ಅಂದು ತಂದಂತಹ ಯೋಜನೆ ಇಂದು ಏನಾಗಿದೆ ʼಶಿವಮೊಗ್ಗ ನಗರ ವಿಶೇಷʼ ಎಂಬುದರ ವಾಸ್ತವ ವಿಷಯವೇನು? ಎಂಬುದನ್ನು ನೋಡೋಣ.
ಶಿವಮೊಗ್ಗ ನಗರದ ಬಹು ಭಾಗಗಳಲ್ಲಿ ಎಲ್ಲೆಂದರಲ್ಲಿ ನಿತ್ಯವೂ ಕಸ ಸುರಿಯುತ್ತಿರುವ ಸಂಗತಿಯನ್ನು ಹೇರಳವಾಗಿ ಕಾಣಬಹುದು. ಇದಕ್ಕೊಂದು ತಾಜಾ ಉದಾಹರಣೆ ಶಿವಮೊಗ್ಗ ನಗರದ ಹೃದಯ ಭಗವಾಗಿರುವ ಗಾಂಧಿ ಬಜಾರ್ ವಾರ್ಡ್ ನಂಬರ್ 22 ಮತ್ತು 23 ಪೂರ್ವ ಮತ್ತು ಪಶ್ಚಿಮ. ಇದು ವ್ಯಾಪಾರ ಕೇಂದ್ರವೂ ಹೌದು. ಹಾಗಾಗಿ ಇಲ್ಲಿಗೆ ನಿತ್ಯವೂ ಬಹುತೇಕ ಸಾರ್ವಜನಿಕರು, ಗ್ರಾಹಕರು ಅನೇಕ ವಸ್ತುಗಳನ್ನು ಖರೀದಿಸುವುದಕ್ಕೆ ಆಗಮಿಸುತ್ತಾರೆ.
ಮುಖ್ಯವಾಗಿ ಗಾಂಧಿ ಬಜಾರ್ನಲ್ಲಿ ಬಟ್ಟೆ ವ್ಯಾಪಾರ, ದಿನಸಿ ವ್ಯಾಪಾರ, ಹೋಲ್ಸೇಲ್ ಮತ್ತು ರಿಟೇಲ್ ಅಂಗಡಿಗಳಿದ್ದು, ಹೂವು, ಹಣ್ಣು, ತರಕಾರಿ ಹೀಗೆ ಅನೇಕ ವಸ್ತುಗಳನ್ನು ಕೊಳ್ಳಲು ಹಲವುಕಡೆಯಿಂದ ಸಾವಿರಾರು ಮಂದಿ ಗ್ರಾಹಕರು ನಿತ್ಯವೂ ಬಂದು ಹೋಗುತ್ತಾರೆ.

ಇಲ್ಲಿ ಮುಖ್ಯವಾಗಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಪ್ರತಿ ದಿನ ರಾತ್ರಿ 9-30 ರಿಂದ ಮುಂಜಾನೆ 3-30ರ ವರೆಗೂ ಸ್ವಚ್ಛತೆ ಮಾಡುತ್ತಾರೆ. ಹಾಗೆಯೇ ಕಸಗಳನ್ನ ಡಂಪ್ ಮಾಡಲು ಕೆಲವೊಂದು ನಿರ್ದಿಷ್ಟ ಜಾಗ ಮಾಡಿಕೊಂಡಿದ್ದಾರೆ. ಅಲ್ಲಿಗೆ ಕಸದ ರಾಶಿ ಗುಡ್ಡೆ ಮಾಡಿ ಅಲ್ಲಿಂದ ಮಹಾನಗರ ಪಾಲಿಕೆಯ ಗಂಟೆ ವಾಹನದ ಮೂಲಕ ಕಸವನ್ನು ವಿಲೇವಾರಿ ಮಾಡಿ ಸ್ವಚ್ಛತೆ ಮಾಡುತ್ತಿದ್ದಾರೆ.
ಆದರೆ ವಾಸ್ತವವಾಗಿ ಗಾಂಧಿ ಬಜಾರ್ನಲ್ಲಿ ಹಾಗೂ ನಗರದ ಹಲವು ಭಾಗಗಳಲ್ಲಿ ಪರಿಸ್ಥಿತಿ ಏನಾಗುತ್ತಿದೆಯೆಂದರೆ, ಸಾರ್ವಜನಿಕರು ಪೌರ ಕಾರ್ಮಿಕರು ಇರುವುದೇ ಕಸ ಬಾಚುವುದಕ್ಕೆಂಬ ರೀತಿಯಲ್ಲಿ ನಗರದ ಹಲವು ಭಾಗಗಳಲ್ಲಿ ಎಲೆಂದರಲ್ಲಿ ಕೆಲವರು ಕಸ ಎಸೆದು ಹೋಗುತ್ತಿದ್ದಾರೆ. ಪೌರ ಕಾರ್ಮಿಕರ ಕೆಲಸ ಮನೆಯ ಕಸ ತೆಗೆದುಕೊಂಡು ಹೋಗುವುದಲ್ಲದೆ ರಸ್ತೆಯಲ್ಲಿರುವ ಕಸ ಬಾಚುವ ಪರಿಸ್ಥಿತಿ ಎದುರಾಗಿದೆ.

ಇದಷ್ಟೇ ಅಲ್ಲದೆ ಮಹಾನಗರ ಪಾಲಿಕೆಯಿಂದ ಶಿವಮೊಗ್ಗ ನಗರ ನಿವಾಸಿಗಳಿಗೆ ಹಸಿಕಸ, ಒಣಕಸ ಬೇರೆ ಬೇರೆ ಮಾಡಿ ಹಾಕಲು ನೆರವಾಗುವಂತೆ ಸಾರ್ವಜನಿಕರಿಗೆ ಲಕ್ಷಾಂತರ ಬಕೆಟ್ಗಳನ್ನು ನೀಡಿದ್ದಾರೆ. ಆದರೆ ಶಿವಮೊಗ್ಗ ನಗರದಲ್ಲಿ ಬಹಳಷ್ಟು ಕಡೆ ಜನರು ಈ ಬಕೆಟ್ಗಳನ್ನು ಮನೆಯಲ್ಲಿ ಅಕ್ಕಿ ಹಿಟ್ಟೋ, ರಾಗಿ ಹಿಟ್ಟೋ, ಬೇಳೆ, ಕಾಳುಗಳನ್ನು ಹಾಕಿಡಿಡಲು ಕೊಟ್ಟಿದ್ದರೋ, ಮನೇಲಿ ಇಟ್ಟಿದ್ದಾರೋ ಎಂಬ ಪ್ರಶ್ನೆ ಕಾಡತೊಡಗಿದೆ.
ಕಸ ವಿಂಗಡಣೆಗೆ ಕೊಟ್ಟಿರುವ ಲಕ್ಷಾಂತರ ಬಕೆಟ್ಗಳು ನಗರದಲ್ಲಿ ಕಾಣದಂತಾಗಿದ್ದು, ಅವುಗಳು ಏನಾದವು ಎನ್ನುವುದೇ ತಿಳಿಯದಾಗಿದೆ. ಹಾಗೆಯೇ ಪೌರಕಾರ್ಮಿಕರು ಡಂಪ್ ಮಾಡಲು ಜಾಗ ಗುರಿತಿಸಿರುವ ಕಾರಣ ಸಾರ್ವಜನಿಕರು ಈ ರೀತಿ ಅಲ್ಲಿ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಕಸ ಎಸೆಯುತ್ತಿದ್ದರೋ ಗೊತ್ತಿಲ್ಲ. ಯಾವ ಒಂದು ಕಾರಣಕ್ಕೆ ಜನರ ಮನೋಸ್ಥಿತಿ ಹೀಗೆ ಬದಲಾವಣೆಯಾಯಿತು? ಎಂಬ ಪ್ರಶ್ನೆಯಿದೆ.

ಮುಖ್ಯ ವಿಷಯ ಏನಂದರೆ ಪೌರ ಕಾರ್ಮಿಕರು ರಾತ್ರಿ 9-30 ರಿಂದ ಮುಂಜಾನೆ 3-30ರವರೆಗೂ ಗಾಂಧಿ ಬಜಾರ್ ಪೂರ್ವ ಪಶ್ಚಿಮ ಸ್ವಚ್ಛತೆ ಮಾಡುತ್ತಾರೆ. ಪುನಃ ಬೆಳಿಗ್ಗೆ 5-30ರಿಂದ ಎಷ್ಟು ಸ್ವಚ್ಛತೆ ಮಾಡಿರುತ್ತಾರೋ ಅಷ್ಟೇ ಪ್ರಮಾಣ ಕಸದ ರಾಶಿ ಬೆಳಿಗ್ಗೆ ಸಮಯಕ್ಕೆ ಬಿದ್ದಿರುತ್ತದೆ. ಇದರಿಂದ ಇದೊಂದು ಕಮರ್ಷಿಯಲ್ ವ್ಯಾಪಾರ ವಹಿವಾಟಿನ ಕೇಂದ್ರ ಬಿಂದುವಿವಿನಂತಾಗಿದೆ. ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೀಗೆ ಆದರೆ, ನಿತ್ಯ ಇಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ಶಿವಮೊಗ್ಗ ನಗರ ವಾಸಿಗಳ ಆರೋಗ್ಯದ ಕಥೆ ಏನು?
ವ್ಯಾಪಾರಸ್ಥರು, ಸ್ಥಳೀಯರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರ ಬದಲಿಗೆ ಮಹಾನಗರ ಪಾಲಿಕೆಯ ಕಸದ ಗಾಡಿ ಬಂದಾಗ ಅದಕ್ಕೇ ಕಸವನ್ನು ತಂದು ಹಾಕಬಹುದು. ಸಾರ್ವಜನಿಕರಿಗೆ ಯಾಕಿಷ್ಟು ತಾಳ್ಮೆ ಇಲ್ಲದಾಗಿದೆ ಎಂಬುದು ಶಿವಮೊಗ್ಗದ ಪ್ರಜ್ಞಾವಂತರ ಪ್ರಶ್ನೆಯಾಗಿದೆ. ನಗರದಲ್ಲಿ ಸ್ವಚ್ಛತೆ ಕಾಪಾಡುವುವದು ನಮ್ಮ ಮನೆ ಸ್ವಚ್ಛತೆಯಷ್ಟೇ ಮುಖ್ಯವಲ್ಲವೇ?
ಈ ಸುದ್ದಿ ಓದಿದ್ದೀರಾ? ಬೀದರ್ | ಒಗ್ಗರಣೆ ಅನ್ನ ಸೇವನೆ : 50 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
ಮಧ್ಯರಾತ್ರಿ 3ಗಂಟೆವರೆಗೂ ಈ ದಿನ.ಕಾಮ್ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಇದರ ರಿಯಾಲಿಟಿ ಚೆಕ್ ಮಾಡಿದಾಗ ಎಲ್ಲೆಂದರಲ್ಲಿ ಕಸ ಸುರಿಯುವ ದೃಶ್ಯಗಳು ಕಂಡುಬಂದಿವೆ.
ಇದರ ಕುರಿತಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಅರೋಗ್ಯಧಿಕಾರಿಗಳು ನಗರ ಸ್ವಚ್ಛತೆ ಕಾಪಾಡಲು ದಂಡ ವಿಧಿಸುವ ಯೋಜನೆ ಕಾರ್ಯರೂಪಕ್ಕೆ ತರುವರೇ ಅಥವಾ ಸಾರ್ವಜನಿಕರಿಗೆ ಅರಿವು ಮೂಡಿಸಲು ಏನಾದರೂ ಕಾರ್ಯಕ್ರಮ ಹಮ್ಮಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.





