ಶಿರಸಿ: ಅರಣ್ಯ ಹಕ್ಕು ಕಾಯ್ದೆ–2005ರಡಿ ಅರಣ್ಯ ಹಕ್ಕು ಮಂಜೂರು ಮಾಡಲು, ಸಾಂಪ್ರದಾಯಿಕ ಪದ್ಧತಿ–ಸಂಪ್ರದಾಯ, ಪವಿತ್ರ ಸ್ಥಳಗಳು ಹಾಗೂ ಭೌತಿಕ ಗುಣಲಕ್ಷಣಗಳಿಗೆ ಸಂಬಂಧಿಸಿದ ಕನಿಷ್ಠ ಎರಡು ಪುರಾವೆಗಳನ್ನು ಸಾಕ್ಷ್ಯವೆಂದು ಪರಿಗಣಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೇ ವಿಧಾನಸಭೆಯಲ್ಲಿ ಲಿಖಿತವಾಗಿ ತಿಳಿಸಿದ್ದಾರೆ. ಈ ಮಾಹಿತಿಯನ್ನು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸದಸ್ಯರು ಹಾಗೂ ಮಾಜಿ ಸಚಿವರಾದ ಅರೇಬೈಲ್ ಶಿವರಾಮ ಹೆಬ್ಬಾರ್ ಅವರು ನಿಯಮ 73 ರ ಅಡಿಯಲ್ಲಿ ಸರ್ಕಾರದ ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು.
2005ರ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಅರಣ್ಯ ಹಕ್ಕುದಾರರು ಕೆಲವು ನಿಬಂಧನೆಗಳು ಮತ್ತು ಅಧಿಕಾರಿಗಳ ತಿಳುವಳಿಕೆ ಕೊರತೆಯಿಂದ ಹಕ್ಕು ಮಂಜೂರಾತಿ ಪಡೆಯಲು ತೊಂದರೆ ಅನುಭವಿಸುತ್ತಿರುವ ಬಗ್ಗೆ ಅವರು ಸರ್ಕಾರದ ಗಮನ ಸೆಳೆದಿದ್ದರು. ಹೆಬ್ಬಾರ್ ಅವರ ಈ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವರು, ಅರಣ್ಯ ಹಕ್ಕು ಕಾಯ್ದೆಯಲ್ಲಿನ ಪ್ರಮುಖ ಅಂಶಗಳನ್ನು ವಿವರವಾಗಿ ಪ್ರಸ್ತುತಪಡಿಸಿದ್ದಾರೆ ಎಂದು ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದರು.

ಲಿಖಿತ ಉತ್ತರದಲ್ಲಿ ಪ್ರಸ್ತಾಪಿಸಲಾದ ಅಂಶಗಳ ಪ್ರಕಾರ, ಗ್ರಾಮ ಸಭೆಯಿಂದ ರಚಿಸಲ್ಪಟ್ಟ ಅರಣ್ಯ ಕ್ಲೇಮುಗಳನ್ನು ಕ್ಷೇತ್ರಕ್ಕೆ ಭೇಟಿ ನೀಡಿ, ಕ್ಲೇಮುಗಳ ಸ್ವರೂಪ, ವ್ಯಾಪ್ತಿ ಮತ್ತು ಪುರಾವೆಗಳನ್ನು ಭೌತಿಕವಾಗಿ ಪರಿಶೀಲಿಸಿ, ಗ್ರಾಮ ಸಭೆಯ ನಿರ್ಣಯವನ್ನು ಅಂಗೀಕರಿಸತಕ್ಕದ್ದು. ಇದರೊಂದಿಗೆ, ಸಾಗುವಳಿ ಕ್ಷೇತ್ರದ ಹಕ್ಕಿಗೆ ಭೌತಿಕ ಆಧಾರವು ಮಹತ್ವ ಎಂದು ಉತ್ತರದಲ್ಲಿ ಉಲ್ಲೇಖಿಸಲಾಗಿದೆ.
ಜನ ವಸತಿ ಮತ್ತು ಸಾಗುವಳಿ ಕ್ಷೇತ್ರದ ಪುರಾವೆಗೆ ಸಂಬಂಧಿಸಿದಂತೆ ಪರಿಗಣಿಸಲಾಗುವ ಸಾಕ್ಷ್ಯಗಳ ಪಟ್ಟಿಯನ್ನು ಅರಣ್ಯ ಸಚಿವರು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಪುರಾತನ ಕಾಲದ ಬಾವಿಗಳು, ಸಮಾಧಿ ಸ್ಥಳಗಳು, ಪವಿತ್ರ ಸ್ಥಳಗಳಂತಹ ಪ್ರಾಚೀನತೆಯನ್ನು ಸ್ಥಾಪಿಸುವ ಸಾಂಪ್ರದಾಯಿಕ ರಚನೆಗಳು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಬೆಂಗಳೂರು ತ್ಯಜಿಸಿ ಬಂದ ಸುಭಾಸ್ಚಂದ್ರ ನಾಯ್ಕ್ಗೆ ನರೇಗಾ ಕೈ ಹಿಡಿತು: ಕುರಿ ಸಾಕಾಣಿಕೆಯಲ್ಲಿ ಲಕ್ಷಗಳ ಆದಾಯ!
ಮನೆ, ಗುಡಿಸಲುಗಳು, ನೆಲಸಮಗೊಳಿಸುವಿಕೆ, ಕಟ್ಟೆಗಳು, ಚೆಕ್ ಡ್ಯಾಮ್ಗಳು ಮತ್ತು ಮುಂತಾದವುಗಳಂತಹ ಭೂಮಿಗೆ ಮಾಡಿದ ಶಾಶ್ವತ ಸುಧಾರಣೆಗಳು. ಈ ಭೌತಿಕ ಗುಣಲಕ್ಷಣಗಳನ್ನು ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗುವುದೆಂದು ಸಚಿವರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





