ಶಿವಮೊಗ್ಗ, ಜಗತ್ತಿನ ಎಲ್ಲಾ ಧರ್ಮಗಳು ಪಿತೃ ಪ್ರಧಾನ ಮೌಲ್ಯಗಳನ್ನೇ ಅಳವಡಿಸಿಕೊಂಡಿವೆ. ಯಾವುದೇ ಧರ್ಮ ಸ್ತ್ರೀವಾದವನ್ನು ಬೆಂಬಲಿಸುವುದಿಲ್ಲ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ “ವೀಣಾ ಶಾಂತೇಶ್ವರ ಅವರ ಕಥನ : ಓದು ಮತ್ತು ಸಂವಾದ” ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಅಂಬೇಡ್ಕರ್ ಬರಹಗಳು ಸ್ತ್ರೀವಾದಕ್ಕೆ ಹತ್ತಿರವಾಗಿದ್ದು ಹೆಣ್ಣಿನ ಬದುಕನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ. ಅನೇಕ ತಾತ್ವಿಕತೆಗಳ ಹಿನ್ನೆಲೆಯಲ್ಲಿ ಸ್ತ್ರೀವಾದವನ್ನು ನೋಡಲಾಗುತ್ತಿದೆ. ಸ್ತ್ರೀವಾದ ಇಂದು ಹಲವಾರು ನೆಲೆಗಳಲ್ಲಿ ಹರಡಿಕೊಂಡಿದೆ. ಜೊತೆಗೆ ಗೊಂದಲಗಳೂ ಕಾಣುತ್ತಿವೆ. ಇದನ್ನು ಎಚ್ಚರಿಕೆಯಿಂದ ಅರಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಕನ್ನಡ ಆಧ್ಯಾಪಕರ ವೇದಿಕೆ ಹಾಗೂ ಕನ್ನಡ ಭಾರತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷೆ ಡಾ. ಸಬಿತಾ ಬನ್ನಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ವೀಣಾ ಶಾಂತೇಶ್ವರ ಅವರು ಅರವತ್ತು ಎಪ್ಪತ್ತರ ದಶಕದಲ್ಲಿಯೇ ವಿಶಿಷ್ಟವಾದ ಕಥೆಗಳನ್ನು ರಚಿಸಿದರು. ವೀಣಾ ಅವರ ಕಥೆಗಳನ್ನು ಸಾಹಿತ್ಯ ವಲಯದವರು ಮಾತ್ರವಲ್ಲದೆ ಭಿನ್ನ ವಲಯಗಳಿಂದ ಬಂದು ಓದುಗರು ಇಂದು ಓದುತ್ತಿದ್ದಾರೆ. ಅವರ ಕಥೆಗಳಲ್ಲಿ ಮೇಲ್ನೋಟಕ್ಕೆ ಪುರುಷ ದ್ವೇಷ ಇದೆ ಎನಿಸಿದರೂ ಅವರ ಒಟ್ಟು ಕಥೆಗಳ ಆಶಯ ಬದುಕಿನ ಅನ್ವೇಷಣೆಯೇ ಆಗಿದೆ ಎಂದರು.
ವಿಮರ್ಶೆಕ ಡಾ. ಕೆ. ಕೇಶವ ಶರ್ಮ ಹಾಗೂ ಬರಹಗಾರ್ತಿ ಡಾ. ತಾರಿಣಿ ಶುಭದಾಯಿನಿ ಅವರು ವೀಣಾರವರ ಕಥೆಗಳ ಕುರಿತು ಉಪನ್ಯಾಸ ನೀಡಿದರು. ಕನ್ನಡ ಭಾರತಿ ನಿರ್ದೇಶಕ ಡಾ. ಸಿದ್ದೇಶ್ ನೆಲ್ಲಿಕಟ್ಟೆ ಅವರು ಸ್ವಾಗತ ಕೋರಿದರು.

ವೇದಿಕೆಯ ಉಪಾಧ್ಯಕ್ಷ ಡಾ. ಕುಂಸಿ ಉಮೇಶ್ ಉಪಸ್ಥಿತರಿದ್ದರು. ಮಧ್ಯಾಹ್ನದ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಗುಂಪು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ವೀಣಾ ಶಾಂತೇಶ್ವರ ಅವರ ನಿರಾಕರಣೆ ಕಥೆ ಆಧಾರಿತ ನಾಟಕ ಏಕವ್ಯಕ್ತಿ ಪ್ರದರ್ಶನ ನಡೆಯಿತು.





