ಮುಜರಾಯಿ ಇಲಾಖೆಗೆ ಒಳಪಟ್ಟ ಜಿಲ್ಲೆಯ ದೇವಾಲಯಗಳಲ್ಲಿ ಕಡ್ಡಾಯವಾಗಿ ʼಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ದೇವಸ್ಥಾನ, ಕರ್ನಾಟಕ ಸರ್ಕಾರʼ ಎಂಬ ನಾಮಫಲಕ ಹಾಗೂ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ತಹಶೀಲ್ದಾರ್ಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸೂಚನೆ ನೀಡಿದರು.
ಮುಜರಾಯಿ ದೇವಸ್ಥಾನಗಳಲ್ಲಿ ವ್ಯವಸ್ಥಾಪಕ ಸಮಿತಿ ರಚನೆ, ಅರ್ಚಕರ ನೇಮಕಾತಿ ಹಾಗೂ ಜೀರ್ಣೋದ್ಧಾರದ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಶಿವಮೊಗ್ಗದ ಭದ್ರಾವತಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದ ವೈಕುಂಠ ಏಕಾದಶಿಯಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗದ ಕುರಿತು ಕೂಡಲೇ ವರದಿ ಸಲ್ಲಿಸಬೇಕು. ಸೊರಬದ ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಇಒ, ದೇವಾಲಯಕ್ಕೆ ಬಂದಿದ್ದ ಹರಕೆ ಸೀರೆಗಳನ್ನು ಮನಬಂದಂತೆ ಹಂಚಿಕೆ ಮಾಡಿರುವುದು ಹಾಗೂ ಅಕ್ಕಿ, ಎಣ್ಣೆ ಸೇರಿದಂತೆ ಇತರೆ ವಸ್ತುಗಳ ಬಗ್ಗೆ ಸರಿಯಾದ ನಿರ್ವಹಣೆ ಇಲ್ಲದಿರುವುದು, ದೇವಾಲಯಕ್ಕೆ ಬಂದ ಭಕ್ತರೊಂದಿಗೆ ಒರಟಾಗಿ ವರ್ತಿಸುತ್ತಾರೆ ಎಂಬ ಆರೋಪದ ಕುರಿತು ಸಮಗ್ರ ವಿವರ ನೀಡಬೇಕು” ಎಂದು ತಹಶೀಲ್ದಾರ್ಗಳಿಗೆ ಸೂಚಿಸಿದರು.
ಇದನ್ನು ಓದಿ: ಶಿವಮೊಗ್ಗ | ರೈತನಿಗೆ ಪರಿಹಾರ ಪಾವತಿಯಲ್ಲಿ ವಿಳಂಬ; ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ
ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯರೂ ಆದ ನಿವೃತ್ತ ನ್ಯಾ.ಸಿ ಸೆಲ್ವಕುಮಾರ್, ವಿದುಶಿ ಗೀತಾ ದಾತಾರ್, ಎಂ ಶಿವಲಿಂಗಪ್ಪ, ವರಲಕ್ಷ್ಮೀ, ಎನ್ ಉಮಾಪತಿ, ಎಸ್ ಡಿ ಪ್ರವೀಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





