ರೈತನ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಬರೋಬ್ಬರಿ 33 ವರ್ಷಗಳೇ ಕಳೆದಿದ್ದರೂ, ರೈತನಿಗೆ ಪರಿಹಾರ ಪಾವತಿ ನಡೆದ ನಿರ್ಲಕ್ಷಿಸಿದ್ದ ಜಿಲ್ಲಾಧಿಕಾರಿಯ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
1992ರಲ್ಲಿ ಶಿವಮೊಗ್ಗದ ಹರಮಘಟ್ಟದ ರೈತ ನಂದಾಯಪ್ಪ ಅವರ 1 ಎಕರೆ ಭೂಮಿಯನ್ನು ವಸತಿ ಯೋಜನೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಭೂಸ್ವಾಧೀನಕ್ಕೆ ಪರಿಹಾರವಾಗಿ 22 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿತ್ತು. ಆದರೆ, 9 ಲಕ್ಷ ರೂ.ಗಳನ್ನು ಮಾತ್ರವೇ ನೀಡಿದ್ದ ಸರ್ಕಾರ, ಉಳಿದ ಹಣವನ್ನು ಬಾಕಿ ಉಳಿಸಿಕೊಂಡಿತ್ತು ಎಂದು ವರದಿಯಾಗಿದೆ.
ಬಾಕಿ ಪರಿಹಾರಕ್ಕಾಗಿ ರೈತ ನಂದಾಯೊಪ್ಪ ಅವರು ಜಿಲ್ಲಾಧಿಕಾರಿ ಕಚೇರಿಗೂ ಮನೆಗೂ ಅಲೆದಾಡಿ ಬಸವಳಿಸಿದ್ದರು. ಅಂತಿಮವಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಚೇರಿಗೂ ಮನೆಗೂ ಅಲೆದಾಡಲು ಮತ್ತು ನ್ಯಾಯಾಲಯದ ವ್ಯಾಜ್ಯಗಳಿಗಾಗಿ ಮತ್ತೊಂದು ಎಕರೆ ಜಮೀನನ್ನೂ ಕಳೆದುಕೊಂಡಿದ್ದೇನೆ. ತಮಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಕೋರಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿರುವ 2ನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ರೈತನಿಗೆ 95,88,283 ರೂ. ಪರಿಹಾರ ಪಾವತಿಸುವಂತೆ ಸೂಚಿಸಿತ್ತು. ಆದರೂ, ಜಿಲ್ಲಾಧಿಕಾರಿಗಳು ರೈತನಿಗೆ ಪರಿಹಾರ ಪಾವತಿ ಮಾಡಿರಲಿಲ್ಲ.
ಈ ಲೇಖನ ಓದಿದ್ದೀರಾ?: ದ್ವೇಷ ಭಾಷಣ ನಿಷೇಧ ವಿಧೇಯಕ | ಕರ್ನಾಟಕದ ಸೌಹಾರ್ದ ಪರಂಪರೆಗೆ ರಕ್ಷಾ ಕವಚವಾಗಬಲ್ಲದೇ?
ಜಿಲ್ಲಾಧಿಕಾರಿ ನಡೆಗೆ ಅಸಮಾಧಾನಗೊಂಡಿರುವ ನ್ಯಾಯಾಲಯವು, ಜಿಲ್ಲಾಧಿಕಾರಿ ಬಳಸುತ್ತಿರುವ ಕಾರು ಜಪ್ತಿ ಮಾಡುವಂತೆ ಆದೇಶಿಸಿದೆ.
ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ, ಎಲೆ ಚುಕ್ಕಿ ರೋಗಗಳ ನಿರ್ವಹಣೆ ಸಂಬಂಧ ಉನ್ನತ ಮಟ್ಟದ ಸಭೆ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ನ್ಯಾಯಾಲಯದ ಅಮೀನರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಜಿಲ್ಲಾಧಿಕಾರಿಗಳು ಪರಿಹಾರ ವಿತರಣೆಗೆ ಗಡುವು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.




