ಶಿವಮೊಗ್ಗ, ಕರ್ನಾಟಕ ರಾಜ್ಯಕ್ಕೆ ವಿದ್ಯುತ್ ಸ್ವಾವಲಂಬನೆ ತರಲು ಶರಾವತಿ ಕಣಿವೆಯಲ್ಲಿ 8,644 ಕೋಟಿ ರೂಪಾಯಿ ವೆಚ್ಚದ “ಶರಾವತಿ ಪಂಪ್ಡ್ ಯೋಜನೆ” ಯನ್ನು ಸರ್ಕಾರ ಘೋಷಿಸಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ. ಇದು ದೇಶದಲ್ಲೇ ಅತಿ ದೊಡ್ಡ ಯೋಜನೆಯಾಗಿದ್ದು, 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಯೋಜನೆಯು ರಾಜ್ಯದ ಭವಿಷ್ಯದ ವಿದ್ಯುತ್ ಅಭಾವವನ್ನು ಸಂಪೂರ್ಣವಾಗಿ ನಿವಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಯೋಜನೆಯಿಂದ ವಿದ್ಯುತ್ ಭದ್ರತೆ ಮತ್ತು ಉದ್ಯೋಗಾವಕಾಶಯೋಜನೆಯ ಕುರಿತು ವಿವರಿಸಿದ ಗೋಪಾಲಕೃಷ್ಣ, “ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ವಿದ್ಯುತ್ ಕೊರತೆಯುಂಟಾಗಿ ಹಣ ನೀಡಿ ವಿದ್ಯುತ್ ಖರೀದಿಸಬೇಕಾಗಿತ್ತು. ಆದರೆ, ಶರಾವತಿ ಪಂಪ್ಡ್ ಯೋಜನೆಯಿಂದ ಇಂತಹ ಪರಿಸ್ಥಿತಿ ಮರುಕಳಿಸುವುದಿಲ್ಲ” ಎಂದರು.
ಈ ಯೋಜನೆಗೆ ಸ್ಥಳೀಯ ಜನರ ಸುಮಾರು 8 ಎಕರೆ ಜಾಗವನ್ನು ಬಳಸಿಕೊಳ್ಳಲಾಗುವುದು ಮತ್ತು 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ದೊಡ್ಡ ಸುರಂಗವನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು. ರೈತರ ಭೂಮಿಗೆ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ಭರವಸೆ ನೀಡಿದ ಅವರು, ಯೋಜನೆಗೆ ಭೂಮಿ ನೀಡುವ ರೈತರಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗುವುದು ಎಂದು ಪ್ರಕಟಿಸಿದರು.ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕವಾಗಿ ದುರ್ಬಲವಾಗಿದೆ ಎಂದು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೋಪಾಲಕೃಷ್ಣ, “ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವುದರ ಜೊತೆಗೆ, ಈ 8 ಸಾವಿರ ಕೋಟಿ ರೂಪಾಯಿ ವೆಚ್ಚದ ಪಂಪ್ಡ್ ಯೋಜನೆಗೆ ಹಣ ಬಿಡುಗಡೆ ಮಾಡುವ ಮೂಲಕ ನಾವು ನಮ್ಮ ಸಾಮರ್ಥ್ಯವನ್ನು ತೋರಿಸಿದ್ದೇವೆ” ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ ;
ರಾಜ್ಯದಲ್ಲಿ 10 ಸಚಿವರ ಬದಲಾವಣೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೋಪಾಲಕೃಷ್ಣ, ಸುರ್ಜೇವಾಲರವರು ರಾಜ್ಯ ಪ್ರವಾಸ ಕೈಗೊಂಡು 100 ಶಾಸಕರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಆ ವಿಚಾರವನ್ನು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದಾರೆ.
“ಸುರ್ಜೇವಾಲರವರು ನನ್ನನ್ನು ಸಹ ಭೇಟಿ ಮಾಡಿದ್ದರು, ನಾನು ಸಹ ಸಚಿವ ಆಕಾಂಕ್ಷಿ ಎಂದು ಅವರ ಬಳಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ” ಎಂದರು.
ಸಿಗಂದೂರು ಸೇತುವೆ ಉದ್ಘಾಟನೆ ಗೈರು ಹಾಜರಿ ಸ್ಪಷ್ಟನೆ ;
ಇದೇ ವೇಳೆ, ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭಕ್ಕೆ ತಾವು ಗೈರು ಹಾಜರಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಅವರು, ಸೇತುವೆ ನಿರ್ಮಾಣಕ್ಕಾಗಿ ತಾವು ಪಾದಯಾತ್ರೆ ಮಾಡಿ ಹೋರಾಟ ನಡೆಸಿದ್ದಲ್ಲದೆ, ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯಲು ಸಲಹೆಗಳನ್ನೂ ನೀಡಿದ್ದಾಗಿ ಹೇಳಿದರು.
ಆದರೆ, ನಿನ್ನೆ ನಡೆದ 2,000 ಕೋಟಿ ರೂಪಾಯಿ ಕಾಮಗಾರಿ ಯೋಜನೆ ಉದ್ಘಾಟನೆಗೆ ಮುಖ್ಯಮಂತ್ರಿಗಳಿಗೆ ಕೇವಲ ಮೂರು ದಿನಗಳ ಹಿಂದೆ ಪತ್ರದ ಮೂಲಕ ಆಹ್ವಾನ ನೀಡಲಾಗಿತ್ತು. “ಅದೇನು ಮದುವೆ ಕಾರ್ಯಕ್ರಮನ?” ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಗಳು ಕರೆ ಮಾಡಿ ಕಾರ್ಯಕ್ರಮಕ್ಕೆ ತೆರಳದಂತೆ ಸೂಚಿಸಿದ್ದರಿಂದ ತಾವು ಹಾಜರಾಗಿರಲಿಲ್ಲ ಎಂದು ತಿಳಿಸಿದರು.
ನಿನ್ನೆ ನಡೆದ ಕಾರ್ಯಕ್ರಮವು ಬಿಜೆಪಿಯ ಕಾರ್ಯಕ್ರಮವಾಗಿದ್ದು, ಇದಕ್ಕೆ ಅಧಿಕಾರಿಗಳು ಶಾಮೀಲಾಗಿದ್ದರು. ಶಾಮೀಲಾದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಗೋಪಾಲಕೃಷ್ಣ ಆಗ್ರಹಿಸಿದರು.





