ಶಿವಮೊಗ್ಗ, 9 ದಿನಗಳ ಕಾಲ ನಡೆಯುವ ದಸರಾದಲ್ಲಿ ಕಳೆದ ವರ್ಷ ಆದ ಸಮಸ್ಯೆಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಶಾಸಕ ಚನ್ನಬಸಪ್ಪ ಸೂಚಿಸಿದರು.
’ದಸರಾ ಪೂರ್ವಭಾವಿ ಸಭೆಯ’ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಘಾಟಕರು, ಅತಿಥಿಗಳು, ರಂಗ ಸೇರಿ ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಮಾಡಬೇಕು. ಜಂಬೂ ಸವಾರಿಗಾಗಿ ಆನೆಗಳನ್ನು ಕರೆತರುವುದರ ಆದಿಯಾಗಿ ಅದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.’
ರಾಜ್ಯದಲ್ಲಿಯೇ ಶಿವಮೊಗ್ಗ ದಸರಾಕ್ಕೆ ಉತ್ತಮ ಅಭಿಪ್ರಾಯ ಇದೆ. ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಅವರು ಕೂಡ ಇದನ್ನೇ ಹೇಳಿದ್ದರು. ಇದು ಎಲ್ಲರೂ ಸೇರಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದರ ಪ್ರತಿಫಲವಾಗಿದೆ. ಈ ಸಲವೂ ಅನುದಾನಕ್ಕಾಗಿ ಸಿಎಂ ಭೇಟಿ ಮಾಡುತ್ತೇನೆ. ಪಾಲಿಕೆಯಿಂದ ಅಗತ್ಯ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಿ’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
‘ಚಾಮುಂಡೇಶ್ವರಿ ದೇವಿಗೆ ಪ್ರತಿ ವರ್ಷ ಚಿನ್ನದ ಒಡವೆ ನೀಡುವುದು ವಾಡಿಕೆ. ಇದನ್ನು ನಿರಂತರವಾಗಿ ಆಚರಿಸಿಕೊಂಡು ಬರುತ್ತಿದ್ದು, ಕಳೆದ ಬಾರಿ ಕಾಸಿನ ಸರ ನೀಡಲಾಗಿತ್ತು. ಈ ಬಾರಿ ಏನು ನೀಡಬಹುದು ಎಂದು ಮುಂಚಿತವಾಗಿಯೇ ನಿರ್ಧರಿಸಿದರೆ ಅನುಕೂಲವಾಗಲಿದೆ. ಒಂದು ವೇಳೆ, ರಚಿಸಿದ ಸಮಿತಿಗಳೇ ಕಾರ್ಯ ನಿರ್ವಹಣೆಯಲ್ಲಿ ವಿಳಂಬ ಧೋರಣೆ ತೋರಿದರೆ ಇಡೀ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ, ಎಚ್ಚರಿಕೆ ವಹಿಸಬೇಕು’ ಸೂಚಿಸಿದರು.
ಆಯುಕ್ತ ಮಾಯಣ್ಣಗೌಡ ಮಾತನಾಡಿ, ‘ಗಣೇಶ ಹಬ್ಬ, ಈದ್ ಮಿಲಾದ್ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕಾಗಿ ವಾರ್ಡ್ವಾರು ಜವಾಬ್ದಾರಿಗಳನ್ನು ಹಂಚಲಾಗಿದ್ದು, ಇದರ ನಡುವೆ ತಮ್ಮ ಕರ್ತವ್ಯಗಳನ್ನು ಸಹ ಸರಿಯಾಗಿ ನಿರ್ವಹಿಸಬೇಕು ಸೂಚಿಸಿದರು.
ದಸರಾ ಅಂಗವಾಗಿ ಒಟ್ಟು ೧೪ ಸಮಿತಿಗಳನ್ನು ರಚಿಸಲಾಗಿದ್ದು, ಪಾಲಿಕೆ ಮಹಾನಗರ ಅಧಿಕಾರಿಗಳು, ಸಿಬ್ಬಂದಿಗೆ ಇದರ ಜವಾಬ್ದಾರಿ ನೀಡಲಾಯಿತು.





