ಶಿವಮೊಗ್ಗ, ಸಂಸದ ರಾಘವೇಂದ್ರ ಮೊದಲ ಬಾರಿ ಯಾವ ಕೋಟದಲ್ಲಿ ಲೋಕಸಭಾ ಸದಸ್ಯರಾಗಿದ್ದಾರೆ, ಸಂಸದರ ಸಹೋದರ ಬಿ ವೈ ವಿಜಯೇಂದ್ರ ಯಾವ ಕೋಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ ಎನ್ನುವುದನ್ನು ಸ್ಪಷ್ಟೀಕರಣ ನೀಡಬೇಕೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಬಗ್ಗೆ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಅಹಿಂದ ಮೀಸಲಾತಿಯಿಂದಾಗಿ ಸಚಿವರಾಗಿದ್ದಾರೆಂದು ಹೇಳಿದ್ದಾರೆ ಎನ್ನುವುದಕ್ಕೆ ತಿರುಗೇಟು ನೀಡಿದರಲ್ಲದೆ, ಪುರಸಭಾ ಸದಸ್ಯನಾಗಿದ್ದ ತಾನು ಎಂಪಿ ಆಗಲು ಯಾವ ಹಂತದ ಅರ್ಹತೆ ಪಡೆದಿದ್ದರು. ಇದರ ಬಗ್ಗೆ ಚರ್ಚೆ ಮಾಡಬೇಕು. ಮನಸ್ಸಿಗೆ ಬಂದಂತೆ ಮಾತನಾಡಬಾರದು. ಮೊದಲು ತಮ್ಮ ವಿಚಾರವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಸ್ಥಾನಮಾನವನ್ನು ಎಲ್ಲರೂ ಪಡೆಯುತ್ತಾರೆ. ಜಾತಿ ಕೂಟದಲ್ಲಿ ಅಲ್ಲ ಎನ್ನುವುದನ್ನು ಸಂಸದರು ಅರಿಯಬೇಕಿದೆ. ನಮ್ಮ ಸಂಸದರು ಸಾಮಾಜಿಕ ವ್ಯವಸ್ಥೆಯ ರಚನೆ ಅರ್ಥೈಸಿಕೊಳ್ಳಲಾಗದವರೆನ್ನುವುದು ವಿಷಾದನೀಯ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ಸಮೀಕ್ಷೆಯ ಫಾರಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಲು ಸೂಚಿಸಿದೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಕುಟುಂಬ ಲಿಂಗಾಯತರೇ ಅಲ್ಲ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪ ಕುಟುಂಬ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀರಶೈವ ಮಹಾಸಭಾದ ನಿರ್ದೇಶಕರಾಗಿರುವ ರಾಘವೇಂದ್ರ ಲಿಂಗಾಯತರಲ್ಲದಿದ್ದರೆ ಹೇಗೆ ನಿರ್ದೇಶಕರಾದರು, ಸಮೀಕ್ಷೆಯಲ್ಲಿ ಹಿಂದು ಎಂದು ಬರೆಸಿದ್ದಾರೋ ಅಥವಾ ವೀರಶೈವ ಲಿಂಗಾಯತ ಎಂದು ಬರೆಸಿದ್ದಾರೋ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಬಗ್ಗೆ ಗೊಂದಲ ಸೃಷ್ಟಿ ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯೇ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿ ಸಚಿವನಾದ ಒಬ್ಬ ವ್ಯಕ್ತಿ ಈ ರೀತಿ ಮಾತನಾಡಬಹುದೇ ಎಂದು ಪ್ರಶ್ನಿಸಿದರು.





