ಇತ್ತೀಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ ಬಿಕಾಂ ಪರೀಕ್ಷೆಯ ಮೌಲ್ಯಮಾಪನವನ್ನು ಡಿಜಿಟಲ್ ರೂಪದಲ್ಲಿ ನಡೆಸಿದ್ದು, ಫಲಿತಾಂಶದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ವಿವಿಯ ಆಡಳಿತ ಡಿಜಿಟಲ್ ಮೌಲ್ಯಮಾಪನಕ್ಕೆ ಸಾಕಷ್ಟು ತಯಾರಿ ನಡೆಸದೇ ಇರುವುದರಿಂದ ಬೇಕಾಬಿಟ್ಟಿ ಫಲಿತಾಂಶಗಳು ಬಂದಿದ್ದು, ವಿವಿಯ ನಿರ್ಲಕ್ಷ್ಯ, ಬೇಜವಾಬ್ದಾರಿ ತನವನ್ನು ಶಿವಮೊಗ್ಗ ಜಿಲ್ಲಾ NSUI ತೀವ್ರವಾಗಿ ಖಂಡಿಸಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಮ್ಯಾನ್ಯುಯಲ್ ಮೌಲ್ಯಮಾಪನದಿಂದ ನಡೆಯುತ್ತಿದ್ದ ಅವ್ಯವಹಾರ ತಡೆಯುವ ನೆಪದಲ್ಲಿ ಕುವೆಂಪು ವಿವಿ ಡಿಜಿಟಲ್ ಮೌಲ್ಯಮಾಪನದ ಮೊರೆ ಹೋಗಿದೆ. ಆದರೆ, ಈ ಮೌಲ್ಯಮಾಪನದಿಂದ ಪ್ರತಿ ಕಾಲೇಜುಗಳಲ್ಲಿಯೂ ಬಿಕಾಂ ತರಗತಿಯ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಮರು ಮೌಲ್ಯಮಾಪನ ಮಾಡಿದಾಗ ಕೇವಲ 0, 5, 6 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಯನ್ನ ಉತ್ತೀರ್ಣಗೊಳಿಸಲಾಗುತ್ತಿದೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಶಿವಮೊಗ್ಗ | ಕನ್ನಡ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ : ಪ್ರೊ. ಶರತ್ ಅನಂತಮೂರ್ತಿ
ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕ ಎಂದು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿರುವ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳ ಫಲಿತಾಂಶದ ಜೊತೆ ಆಟವಾಡುತ್ತಾ ಅವರನ್ನು ಅತಂಕಕ್ಕೆ ದೂಡುತ್ತಿದೆ. ಕೂಡಲೇ ವಿವಿಯ ಕುಲಪತಿಗಳು ಈ ಬಗ್ಗೆ ಗಮನ ಹರಿಸಬೇಕು. ಡಿಜಿಟಲ್ ಮೌಲ್ಯಮಾಪನದಲ್ಲಿ ಆಗಿರುವ ಗೊಂದಲಗಳನ್ನು ಬಗೆಹರಿಸಬೇಕು. ವ್ಯವಸ್ಥಿತ ಪೂರ್ವಸಿದ್ಧತೆಯಿಲ್ಲದೇ ಡಿಜಿಟಲ್ ಮೌಲ್ಯಮಾಪನ ನಡೆಸಲು ಕಾರಣರಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಯಾವುದೇ ಶುಲ್ಕ ಪಡೆಯದೇ ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕು. ಇಲ್ಲವಾದಲ್ಲಿ ಎನ್.ಎಸ್.ಯು.ಐ. ವತಿಯಿಂದ ವಿವಿ ಬಂದ್ನಂತಹ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.





