ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಮೂಡಲ ವಿಠಲಾಪುರ ಗ್ರಾಮದಲ್ಲಿ ಭಾನುವಾರ ಹಳೆ ದ್ವೇಷದ ಕಾರಣಕ್ಕೆ ಗುಂಪೊಂದು ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದೆ.
ಆನವೇರಿ ಗ್ರಾಮದ ತೌಫಿಕ್ (32) ಕೈಗೆ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದ ಟಿಪ್ಪು ನಗರದ ಮುಬಾರಕ್, ಫೌಹಾದ್, ತೋಹಿಬ್ ಹಾಗೂ ತನ್ವಿ ಬಂಧಿತರು. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ಕಾರ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ದನ ಕಳ್ಳ ಸಾಗಾಣೆ ದಂಧೆಯಲ್ಲಿ ತೊಡಗಿರುವ ಗುಂಪಿನ ಚಟುವಟಿಕೆ ಬಗ್ಗೆ ಈ ಹಿಂದೆ ತೌಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕಾರಣಕ್ಕೆ ಶಿವಮೊಗ್ಗದಿಂದ ಹಿಂಬಾಲಿಸಿಕೊಂಡು ಬಂದಿದ್ದು, ಮೂಡಲ ವಿಠಲಾಪುರ ಗ್ರಾಮದ ಹೊಟೇಲ್ನಲ್ಲಿ ಉಪಾಹಾರ ಸೇವಿಸುತ್ತಿದ್ದಾಗ ಆರೋಪಿಗಳು ಕೊಲೆ ಮಾಡಲು ಮುಂದಾಗಿದ್ದರು.
ಹೋಟೆಲ್ಗೆ ಬಂದ ಆರ್ಎಸ್ಎಸ್ ಗಣವೇಷಧಾರಿಗಳನ್ನು ಪೊಲೀಸರೆಂದು ಭಾವಿಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಮಾಹಿತಿಯಾಗಿದೆ.





