ರೈತರ ಉತ್ಪಾದನೆ ಹಾಗೂ ಜೀವನ ಮಟ್ಟದ ಗಣನೀಯ ಸುಧಾರಣೆಗೆ ಅಗತ್ಯವಿರುವ ಪೂರಕ ಸಂಶೋಧನೆ ಮತ್ತು ತಂತ್ರಜ್ಞಾನದ ವರ್ಗಾವಣೆಗೆ ಇನ್ನಷ್ಟು ಶ್ರಮವಹಿಸುವಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸೂಚನೆ ನೀಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ಕೃಷಿ ವಿಶ್ವ ವಿದ್ಯಾಲಯದ ವತಿಯಿಂದ ಶಿವಮೊಗ್ಗದ ನವಿಲೆ ಕೃಷಿ ವಿವಿ ಅವರಣದಲ್ಲಿ ಏರ್ಪಡಿಸಿರುವ ‘ ಕೃಷಿ ಮೇಳ 2025ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
“ರೈತರು ನಿರಂತರ ಪ್ರಾಕೃತಿಕ ಸವಾಲು ಎದುರಿಸಿ, ಶ್ರಮಪಟ್ಟು ಕೃಷಿ ನಡೆಸುತ್ತಿದ್ದು ಅವರ ನೆರವಿಗೆ ರಾಜ್ಯ ಸರ್ಕಾರ ಸದಾ ನಿಲ್ಲಲಿದೆ. ರೈತರು ವೈಜ್ಞಾನಿಕ ಹಾಗೂ ಸಮಗ್ರ ಬೇಸಾಯದ ಬಗ್ಗೆ ಎಚ್ಚು ಗಮನ ಹರಿಸಬೇಕು, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು ಇದಕ್ಕೆ ಕೃಷಿ ವಿವಿಗಳು ನೆರವಾಗಬೇಕು” ಎಂದು ಹೇಳಿದರು.
“ಹೆಚ್ಚು ಧಾನ್ಯಗಳ ಉತ್ಪಾದನೆ ನಮ್ಮ ದೇಶದ ಹಿರಿಮೆ. ಕೃಷಿ ವಿವಿಗಳು ಹೊಸ ತಳಿಗಳು ಹಾಗೂ ತಂತ್ರಜ್ಞಾನದ ಮೂಲಕ ಕಡೆಮೆ ನೀರು ಹಾಗೂ ಸೀಮಿತ ಖರ್ಚಿನಲ್ಲಿ ಅಧಿಕ ಲಾಭ ಪಡೆಯಲು ನೆರವಾಗಬೇಕು. ರೈತರ ಬೆಲೆಗಳಿಗೆ ನ್ಯಾಯಯುತ ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಸಂಶೋಧನೆಗಳ ವೈಜ್ಞಾನಿಕ ಅನುಷ್ಠಾನ, ಬರ ನಿರ್ವಹಣೆ ಮಾಡಿದಾಗ ಮಾತ್ರ ಸುಸ್ಥಿರ ಕೃಷಿ ಸಾಧ್ಯ. ರೈತರ ಬದುಕು ಹಸನು ಮಾಡುವುದು ನಮ್ಮ ಹೊಣೆ. ಕೃಷಿ ಸಂಶೋಧನೆ, ಮೌಲ್ಯ ವರ್ಧನೆಗೆ ಹೆಚ್ಚು ಒತ್ತು ನೀಡಬೇಕು. ಸಿರಿಧಾನ್ಯಗಳಿಗೆ ಪ್ರೋತ್ಸಾಹ ಹೆಚ್ಚಬೇಕು ಇಳುವರಿಯೂ ವೃದ್ಧಿಸಬೇಕು. ಕಾಂಗ್ರೆಸ್ ಸರ್ಕಾರ ಕೃಷಿಗೆ ಬೆಂಬಲ, ಸಂಶೋಧನೆಗಳಿಗೆ ನೆರವು, ಪ್ರೋತ್ಸಾಹ ನೀಡಲು ಸದಾ ಸಿದ್ದ” ಎಂದರು.




ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಶಿವಮೊಗ್ಗ | 6200 ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ ಅಧಿಕಾರಿಗಳು
“ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಎಂಬ ಘೋಷ ವಾಕ್ಯದೊಂದಿಗೆ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಕೃಷಿ ಮೇಳದಲ್ಲಿ ನೂರಾರು ಬಗೆಯ ತಳಿಗಳ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಗಮನ ಸೆಳೆಯುತ್ತಿದೆ. ಸಾವಿರಾರು ರೈತರು ಮೇಳಕ್ಕೆ ಆಗಮಿಸಿ ವೀಕ್ಷಿಣೆ ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾರದ ಪೂರ್ಯ ನಾಯ್ಕ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಶಿವಮೊಗ್ಗ ಕೃಷಿ ವಿವಿಯ ಕುಲಪತಿ ಡಾ. ಜಗದೀಶ್, ವಿವಿಯ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.





