ಶಿವಮೊಗ್ಗ, ಸಾರ್ವಜನಿಕ ಆಟೋ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿಯಿಂದ ಮುಕ್ತಿಗೊಳಿಸಿ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಣಯ ಕೈಗೊಂಡಿದ್ದು, ಸೆಪ್ಟೆಂಬರ್ 1ರಿಂದಲೇ ಅನ್ವಯವಾಗುವಂತೆ ಆರಂಭದ ಹಂತವಾಗಿ ನಗರದ ರೈಲ್ವೇ ನಿಲ್ದಾಣದಿಂದ ಪ್ರೀಪೇಯ್ಡ್ಆಟೋ ಕೌಂಟರ್ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಪ್ರೀಪೇಯ್ಡ್ಆಟೋ ಕೌಂಟರ್ಗಳನ್ನು ಆರಂಭಿಸುವ ಕುರಿತಂತೆ ಶುಕ್ರವಾರ ಏರ್ಪಡಿಸಲಾಗಿದ್ದ ಸಂಬಂಧಿತ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸ್, ಸಾರಿಗೆ, ಮಹಾನಗರಪಾಲಿಕೆ ಇವರುಗಳ ಸಹಯೋಗದೊಂದಿಗೆ ಪ್ರೀಪೇಯ್ಡ್ ವ್ಯವಸ್ಥೆಯನ್ನು ಅನುಷ್ಟಾನಕ್ಕೆ ತರಲಾಗುವುದು ಎಂದರು.
ಅದಕ್ಕೂ ಮುನ್ನ ಆಟೋ ಚಾಲಕರು ಮತ್ತು ಮಾಲೀಕರ ಅಭಿಪ್ರಾಯವನ್ನೂ ಪಡೆದು, ಸಾರ್ವಜನಿಕರು ಹಾಗೂ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಆರಂಭಿಕ ಹಂತದಲ್ಲಿ ರೈಲ್ವೇ ನಿಲ್ದಾಣದಲ್ಲಿ ಆಯ್ದ ಮೂರು ಸ್ಥಳಗಳಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನಗರ ಸ್ಥಳೀಯ ಸ್ವಯಂಸೇವಾ ಸಂಸ್ಥೆ ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ವ್ಯವಸ್ಥಾಪಕರು ಆಸಕ್ತಿ ವಹಿಸಿದ್ದು, ಈಗಾಗಲೇ ಅದರ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದ ಅವರು, ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಹಾಗೂ ಸಹಕಾರವನ್ನು ಪಡೆದು ಕ್ರಮ ವಹಿಸಲಾಗುವುದು ಎಂದವರು ನುಡಿದರು.
ಈ ಪ್ರೀಪೇಯ್ಡ್ಆಟೋ ಕೌಂಟರ್ಗಳ ಆರಂಭದಿಂದ ನಗರದಲ್ಲಿನ ಸಾರ್ವಜನಿಕರು ಹಾಗೂ ನೆರೆಯ ಜಿಲ್ಲೆ, ತಾಲೂಕುಗಳಿಂದ ನಗರಕ್ಕೆ ವಿವಿಧ ಉದ್ದೇಶಗಳಿಗಾಗಿ ಆಗಮಿಸುವವರಿಗೆ ಅನುಕೂಲವಾಗಲಿದೆ ಎಂದ ಅವರು ಸುಗಮ ಸಂಚಾರ ವ್ಯವಸ್ಥೆಯಿಂದಾಗಿ ಶಿಸ್ತು ಮೂಡಲಿದೆ.
ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿರುವ ಈ ವ್ಯವಸ್ಥೆ ಯಶಸ್ವಿಯಾದಲ್ಲಿ ನಗರದ ಎಲ್ಲಾ ಪ್ರಮುಖ ವರ್ತುಲಗಳು, ಜನನಿಬಿಡ ಸ್ಥಳಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.





