ಜೀವನೋಪಾಯಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಪೋಷಕರ ಮಗನಾದ ಚಿತ್ರದುರ್ಗ ತಾಲೂಕಿನ ಚೌಲಿಹಳ್ಳಿ ಗ್ರಾಮದ ಸಂದೀಪ ಎಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅದ್ಭುತ ಸಾಧನೆಯನ್ನು ದಾಖಲಿಸಿದ್ದಾರೆ. ಅತ್ಯಂತ ಸರಳ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಂದೀಪ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ನೀಡುವ ಡಾಕ್ಟರೇಟ್ (ಪಿಎಚ್ಡಿ) ಪದವಿಗೆ ಪಾತ್ರರಾಗಿದ್ದಾರೆ.
ಕೂಲಿ ಕಾರ್ಮಿಕರಾದ ಲೋಕೇಶ್ವರಪ್ಪ ಹಾಗೂ ತಿಪ್ಪಮ್ಮ ದಂಪತಿಗಳ ಪುತ್ರನಾದ ಸಂದೀಪ ಅವರು, ಬಡತನದ ನಡುವೆಯೂ ಗಟ್ಟಿಯಾದ ಕನಸು, ದುಡಿಮೆ ಮತ್ತು ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಂಡಿದ್ದರು. ‘ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಮತ್ತು ಪ್ರಶಿಕ್ಷಕರ-ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ’ ಎಂಬ ಗಂಭೀರ ಅಕಾಡೆಮಿಕ್ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್ಡಿ ಪದವಿಗೆ ಅರ್ಹತೆ ಪಡೆದಿದ್ದಾರೆ.
ಇವರ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ತಜ್ಞ ಪ್ರೊ. ಜಗನ್ನಾಥ್ ಕೆ ಡಾಂಗೆ ಅವರು ಮಾರ್ಗದರ್ಶಕರಾಗಿದ್ದರು.

ಇದನ್ನೂ ಓದಿ: ಶಿವಮೊಗ್ಗ | ನ. 8, 9ರಂದು ʼಸಮೃದ್ಧಿ 2025ʼ ಕಾರ್ಯಾಗಾರ
ʼವಿದ್ಯೆ ಎಂದರೆ ಸಂಪತ್ತು; ಬಡತನ ಎಂದರೆ ಅಡ್ಡಿ ಅಲ್ಲʼ ಎಂಬ ನಂಬಿಕೆಯನ್ನು ಬದುಕಿನ ಮೂಲಕ ಸಾಬೀತುಪಡಿಸಿದ ಸಂದೀಪ ಅವರ ಈ ಸಾಧನೆಗೆ, ಸ್ನಾತಕೋತ್ತರ ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು, ಸಿಬ್ಬಂದಿವರ್ಗ, ಕುಟುಂಬದವರು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
ಗ್ರಾಮೀಣ ಪರಿಸರದಿಂದ ಬಂದು, ಅಷ್ಟೊಂದು ಸವಾಲುಗಳ ನಡುವೆಯೂ ಶೈಕ್ಷಣಿಕ ಶ್ರೇಷ್ಟತೆಯ ಶಿಖರಕ್ಕೇರುತ್ತಿರುವ ಸಂದೀಪ ಅವರ ಕಥೆ ಇಂದಿನ ಯುವಜನತೆಗೆ ಪ್ರೇರಣಾದಾಯಕ ಮಾದರಿಯಾಗಿದೆ.





