ಶಿವಮೊಗ್ಗ, ನಾಲ್ಕೈದು ದಿನಗಳಿಂದ ಬಹಳಷ್ಟು ಜನರ ಬಾಯಲ್ಲಿ ಒಂದೇ ಮಂತ್ರ ಅದುವೇ “ಸು ಫ್ರಮ್ ಸೋ’ ಅಂದಹಾಗೆ ಇದು ಮಂತ್ರವಲ್ಲ, ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜೆ ಪಿ ತುಮಿನಾಡ ನಿರ್ದೇಶನದ ಸುಲೋಚನಾ ಫ್ರಮ್ ಸೋಮೇಶ್ವರ ಎಂಬ ಚಿತ್ರ.
ಈ ಚಿತ್ರವು ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿರುವಷ್ಟು ಸಮಯ ನಗೆಗಡಲಲ್ಲಿ ತೇಲಿಸಿದರೂ ಚಿತ್ರಮಂದಿರದಾಚೆ ಬರುವಾಗ ನಮ್ಮ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ಮಹತ್ತರವಾದ ಜವಾಬ್ದಾರಿಯನ್ನು ಪ್ರತಿಯೊಂದು “ಆತ್ಮ ”ಕ್ಕೂ ಹೊತ್ತು ಕಳುಹಿಸುತ್ತದೆ.
ಈ ಚಿತ್ರದಲ್ಲಿ ಸುಲೋಚನರವರ ಮಗಳು ಒಬ್ಬ ಅನಾಥ ಹೆಣ್ಣು ಮಗಳಾಗಿರುವ ಕಾರಣದಿಂದ ಆಕೆ ಅನುಭವಿಸುವ ಲೈಂಗಿಕ ದೌರ್ಜನ್ಯವನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಹಾಗೂ” ನನ್ನ ತಾಯಿ ಇದ್ದಿದ್ದರೆ ಹೀಗೆ ಆಗೋಕೆ ಬಿಡುತ್ತಿರಲಿಲ್ಲ” ಎನ್ನುವ ಆಕೆಯ ಧ್ವನಿಯು ಪದೇ ಪದೇ ಚಿತ್ರಮಂದಿರದಾಚೆಗೂ ಗುನುಗುಟ್ಟದೇ ಇರದು.
ಇದೇ ವಿಷಯದ ಹಂದರವನ್ನೊಳಗೊಂಡ ಮತ್ತೊಂದು ಮಂತ್ರವೇ “ಮಿಸು ಫ್ರಮ್ ಶಿ “ಅಂದರೆ ಮಿಷನ್ ಸುರಕ್ಷಾ ಫ್ರಮ್ ಶಿವಮೊಗ್ಗ (MISSION SURAKSHA -Safe Urban And Rural Areas for Knowing and Shielding All children Rights )
ಇತ್ತೀಚಿಗೆ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಮಾನ್ಯ ಜಿಲ್ಲಾಧಿಕಾರಿಗಳು ,ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರು ನಮ್ಮ ಜಿಲ್ಲೆಯಲ್ಲಿನ ಅನಾಥ ಹೆಣ್ಣು ಮಕ್ಕಳು, ಒಂಟಿ ಪೋಷಕರ ಹೆಣ್ಣು ಮಕ್ಕಳು ,ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವುದು, ಸೇರಿದಂತೆ ಹಲವು ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಲು ನಗರದ ವಾರ್ಡ್ ಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಕಾವಲು ಸಮಿತಿಯನ್ನು ರಚಿಸಿ ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಗಳನ್ನಾಗಿ ನೇಮಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ನಮ್ಮ ಜಿಲ್ಲೆಯಲ್ಲಿ ಗಣನೀಯವಾಗಿ ಕಡಿಮೆಗೊಳಿಸಲು ಟೊಂಕ ಕಟ್ಟಿ ನಿಲ್ಲುವ ಮಿಷನ್ ಸುರಕ್ಷಾ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಚಿತ್ರಮಂದಿರದಲ್ಲಿ ಹೆಣ್ಣಿನ ಸುರಕ್ಷತೆಯ ದೃಶ್ಯವನ್ನು ನೋಡಿ ಚಪ್ಪಾಳೆ ಹೊಡೆಯುವ ನಾವು ನಮ್ಮ ಹೆಣ್ಣು ಮಕ್ಕಳ ಸುರಕ್ಷತೆಯ ಭಾಗವಾಗಿ ಈ ತರಹದ ಪ್ರಕರಣಗಳನ್ನು ತಡೆಯಲು “1098” ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ಅಥವಾ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರುವುದರ ಮೂಲಕ ಸುರಕ್ಷ ಅಭಿಯಾನಕ್ಕೆ ಕೈಜೋಡಿಸಿದರೆ ಬಾಹ್ಯ ಸಮಾಜದಲ್ಲಿಯೂ ನಮಗೆ ಚಪ್ಪಾಳೆ ಹೊಡೆಯುವುದು ಗ್ಯಾರಂಟಿಯಾಗಿದೆ.
ಈ ನಿಟ್ಟಿನಲ್ಲಿ ಸುರಕ್ಷಾ ಅಭಿಯಾನದ ಭಾಗವಾಗುವುದರೊಂದಿಗೆ ಚಿತ್ರದ ಅಂತ್ಯದಲ್ಲಿ ಸುಲೋಚನರವರ ಮಗಳ ಮುಖದ ಮೇಲಿನ ನಗುವಿನಂತೆ ನಮ್ಮ ಸುತ್ತಮುತ್ತಲಿನ ಹೆಣ್ಣು ಮಕ್ಕಳ ಮುಖದ ಮೇಲೂ ನಗುವನ್ನು ಕಾಣೋಣ, ಅವರ ಗೌರವ ಕಾಪಾಡೋಣವೆಂದು ಶಿವಮೊಗ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶಂಕರ ಎಲ್ ಆರ್ ಅಭಿಪ್ರಾಯಪಟ್ಟಿದ್ದಾರೆ.





