ಶಿವಮೊಗ್ಗ, ಮಾನವತವಾದಿ ಅಂಬೇಡ್ಕರ್ ಚಿಂತನೆಗಳನ್ನು ಸರಿಯಾದ ಕ್ರಮದಲ್ಲಿ ಅರ್ಥೈಸುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಯುವ ಜನತೆ ಮುಂದಾಗಬೇಕು ಎಂದು ಕುವೆಂಪು ವಿವಿ ಕನ್ನಡ ಭಾರತಿ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಕಂಠ ಕೂಡಿಗೆ ಅಭಿಪ್ರಾಯಪಟ್ಟರು.
ಕುವೆಂಪು ವಿವಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಚಿಂತನೆಗಳು ಮತ್ತು ಯುವಜನತೆ ವಿಚಾರ ಸಂಕಿರಣದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಸಂಘಟನೆ ಹೋರಾಟದ ಸೂತ್ರಗಳನ್ನು ನೀಡಿದ ಅಂಬೇಡ್ಕರ್ ಹೊಸ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸಿದವರು. ಅವರ ಚಿಂತನೆಗಳನ್ನು ಇಂದಿನ ಯುವಜನತೆ ಅರ್ಥೈಸಿಕೊಂಡು ನಾಳಿನ ಸಮಾಜವನ್ನು ರೂಪಿಸಬೇಕಿದೆ ಎಂದರು.
ವಿದ್ಯಾರ್ಥಿಗಳು ಪರೀಕ್ಷೆಗೆ ಮಾತ್ರ ಸೀಮಿತವಾಗದೆ ಚಿಂತಕರ ಬರಹಗಳನ್ನು ಓದುವುದರ ಮೂಲಕ ಹೊಸ ಅರಿವನ್ನು ಪಡೆಯಬೇಕು. ವೈಯಕ್ತಿಕ ಬದುಕಿನ ಆಚೆ ಸಮುದಾಯಿಕ ಬದುಕಿಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕು. ಇದರಿಂದ ಸಮಾನತೆಯ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಮೌಢ್ಯಾಚರಣೆಗೆ ಬದಲಾಗಿ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ವಿಮರ್ಶಕರಾದ ಡಾ. ಕೆ. ಕೇಶವಶರ್ಮ, ಚಿಂತಕರಾದ ಬಿ.ಎಲ್. ರಾಜು, ಡಾ. ಕುಮಾರ ಚಲ್ಯ, ಡಾ. ಬಸವರಾಜ್ ನೆಲ್ಲಿಸರ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಪ್ರಾಂಶುಪಾಲರಾದ ಡಾ. ಎಸ್. ರಾಜೇಶ್ವರಿ, ಡಾ. ಎಸ್.ಎಂ. ಮುತ್ತಯ್ಯ, ಪ್ರಾಧ್ಯಾಪಕರಾದ ಡಾ. ಕೃಷ್ಣಮೂರ್ತಿ, ಡಾ. ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.





