“ಆಗುಂಬೆ ನರಕವಾಗಿಸುವ ಸುರಂಗ ಯೋಜನೆಗೆ ನಮ್ಮ ಧಿಕ್ಕಾರ, ಸಮಸ್ತ ಆಗುಂಬೆ ಗ್ರಾಮಸ್ಥರು” ಎನ್ನುವ ಬ್ಯಾನರ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಕಾಣಸಿಗುತ್ತವೆ. ಪಶ್ಚಿಮ ಘಟ್ಟದ ಆಗುಂಬೆಯಲ್ಲಿ ಸುರಂಗ ಮಾರ್ಗ ಮಾಡಬೇಕು ಎಂದು ಒತ್ತಾಯಿಸುತ್ತಿರುವ ಬಗ್ಗೆ ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಮೂಲಕ ಸುರಂಗದ ಕಾವು ಹೆಚ್ಚಾಗುತ್ತಿದೆ.
ಬ್ಯಾನರ್ ಪೋಟೋ ಹಾಕಿ ಪ್ರತಿಕ್ರಿಯಿಸಿರುವವರೊಬ್ಬರು “ಹೀಗೊಂದು ಬ್ಯಾನರ್ ಅನ್ನು ಆಗುಂಬೆ ಗ್ರಾಮಸ್ಥರು ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆಗುಂಬೆಯನ್ನು ಉಳಿಸುವುದು ಒಂದು ಪ್ರದೇಶದ ವಿಚಾರವಲ್ಲ ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆ” ಎಂಬ ಆಗುಂಬೆ ಜನರ ಪ್ರಬುದ್ಧತೆಯನ್ನು ನಾವೆಲ್ಲರೂ ಮೆಚ್ಚಬೇಕು ಮತ್ತು ಅಭಿನಂದಿಸಬೇಕು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇಂತಥ ವಿವೇಕ ನಮ್ಮ ಜನಪ್ರತಿನಿಧಿಗಳಿಗೆ ಬರಲಿ” ಎಂದು ಆಶಿಸಿದ್ದಾರೆ.
ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ #SaveAgumbe, #StopAgumbeTunnelProject ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಕೂಡ ಆರಂಭಿಸಲಾಗಿದೆ.
ಇದನ್ನು ಪ್ರಶ್ನಿಸಿರುವ ಕೆಲವರು ಆಗುಂಬೆ ಸುತ್ತಮುತ್ತ ಬೋರ್ ವೆಲ್ ಮತ್ತು ತೋಟ ಮಾಡೋದಕ್ಕೆ ಗುಡ್ಡ ಅಗೆದರೆ ಗುಡ್ಡ ಕುಸಿಯುತ್ತೆ. ಸುರಂಗ ಬೇಡವೆಂದರೆ 24 ಗಂಟೆ ಬಸ್ಸಿನ ವ್ಯವಸ್ಥೆ ಮಾಡಿ. ಅದು ಆಗಲ್ಲ ಅಂದ ಮೇಲೆ ಗುಡ್ಡ ಕುಸಿತ ಅರಣ್ಯ ನಾಶ, ಪ್ರಾಣಿಗಳಿಗೆ ತೊಂದರೆ ಇಂಥ ಕಥೆಗಳನ್ನು ಹೇಳ್ಬೇಡಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜೀವ್ ಗಾಂಧಿ ವಸತಿ ಪ್ರೌಢಶಾಲೆ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ
“ಉಡುಪಿಯಿಂದ ಸಂಜೆ 6.50 ರ ನಂತರ ಆಗುಂಬೆ ತೀರ್ಥಹಳ್ಳಿ ಬರುವುದಾದರೆ 130 ರೂಪಾಯಿ ಜಾಸ್ತಿ ಕೊಟ್ಟು, ನಾಲ್ಕ್ ಗಂಟೆ ಜಾಸ್ತಿ ಪ್ರಯಾಣ ಮಾಡಿ ಬರಬೇಕು. ಈ ಸಮಸ್ಯೆಯಿಂದ ಅಪರೂಪಕ್ಕೆ ಪ್ರಯಾಣ ಮಾಡೋ ನಮಗೆ ಸಮಸ್ಯೆಯಾಗುತ್ತೆ ಎಂದರೆ, ಆಗುಂಬೆ ಸುತ್ತ ಮುತ್ತ ವಾಸಿಸುವ ಜನಗಳ ಸಮಸ್ಯೆ ಸ್ವಲ್ಪ ಗಮನಿಸಬೇಕು, ಅದಕ್ಕೆ ಪರಿಹಾರ ದೊರಕಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.





