ಕಳೆದ 35 ಹೋರಾಟ ವರ್ಷಗಳ ಹೋರಾಟದ ಫಲವಾಗಿ ಹಾಗೂ ಸುಪ್ರೀಂ ಕೋರ್ಟಿನ ಆದೇಶದಂತೆ ಜಾರಿಯಾದ ಒಳ ಮೀಸಲಾತಿಯಂತೆ ಮಾದಿಗ ಸಂಬಂಧಿತ ಜಾತಿಗಳಿಗೆ ನೇಮಕಾತಿ ನೀಡಬೇಕು. ಒಳಮೀಸಲಾತಿ ಇಲ್ಲದೆ ನೇಮಕಾತಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಮಾದರ ಮಹಾಸಭಾ ನೇತೃತ್ವದಲ್ಲಿ ದಲಿತ ಸಂಘಟನೆಗಳು ಇಂದು ಶಿವಮೊಗ್ಗ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಾದಿಗ ಸಮಾಜದ ಮುಖಂಡ ಆರ್ ಶಿವಣ್ಣ ಮಾತನಾಡಿ “ಮಾದಿಗ ಸಮುದಾಯದ ಸಂಬಂಧಿತ 17 ಜಾತಿಗಳನ್ನು ಶತಮಾನಗಳಿಂದಲೂ ಕೀಳಾಗಿ ಕಂಡು ಶೋಷಣೆಗೊಳಪಡಿಸಿದ್ದಾರೆ. ಈ ನೆಲೆಯಲ್ಲಿ ನಮ್ಮ ನ್ಯಾಯಕ್ಕಾಗಿ 35 ವರ್ಷಗಳಿಂದಲೂ ಒಳಮೀಸಲಾತಿ ಜಾರಿಗಾಗಿ ಸಂಘಟನೆಗಳು, ಹಿರಿಯರು ಎಲ್ಲರೂ ಸೇರಿ ಹೋರಾಟ ಮಾಡಿದ್ದೇವೆ. ಇದೆಲ್ಲದರ ಪರವಾಗಿ ಸದಾಶಿವ ಆಯೋಗದಂತೆ ನಮಗೆ ಶೇಕಡ ಏಳರಷ್ಟು ಒಳಮೀಸಲಾತಿ ದೊರಕಬೇಕಿತ್ತು. ಯಾವ ಸರ್ಕಾರಗಳು ನಮಗೆ ನ್ಯಾಯ ಒದಗಿಸಿಲ್ಲ. ಸುಪ್ರೀಂ ಕೋರ್ಟ್ ನ ಆದೇಶದ ನಂತರ ಶೇಕಡಾ ಆರು ಒಳಮೀಸಲಾತಿ ನೀಡಿ ಸರ್ಕಾರ ವಿಧಾನಸಭೆ ಮತ್ತು ರಾಜ್ಯಪಾಲರ ಒಪ್ಪಿಗೆ ಪಡೆದು ಕಾಯ್ದೆ ರೂಪಿಸಿದೆ. ಆದರೆ ಈಗ ಇಲ್ಲದ ನೆಪ ಒಡ್ಡಿ 56 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಒಳಮೀಸಲಾತಿ ಹೊರತುಪಡಿಸಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದು. ಇದು ಮಾದಿಗ ಸಮುದಾಯ, ಸಾಮಾಜಿಕ ನ್ಯಾಯಕ್ಕೆ, ದಲಿತರಿಗೆ ಮಾಡಿದ ದ್ರೋಹ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹಿಂದಿನಿಂದಲೂ ಮೀಸಲಾತಿಯನ್ನು ಕಬಳಿಸಿದ ಬಲಾಢ್ಯರು ನಮ್ಮ ಸಮುದಾಯಕ್ಕೆ ಒಳಮೀಸಲಾತಿಯ ನ್ಯಾಯ ಪಡೆಯಲು ಬಿಡುತ್ತಿಲ್ಲ. ಹಳೆ ಮೀಸಲಾತಿಯಂತೆ ನೇಮಕಾತಿಗೆ ಒತಾಯಿಸುತ್ತಿದ್ದಾರೆ. ಆದರೆ ನಾಗಮೋಹನ್ ದಾಸ್ ಆಯೋಗದ ವರದಿಯಂತೆ, ರಾಜ್ಯ ಸರ್ಕಾರ ರೂಪಿಸಿರುವ ಕಾಯ್ದೆಯಂತೆ ಒಳಮೀಸಲಾತಿ ನೀಡಿ ನೇಮಕಾತಿ ನಡೆಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಮಾದಿಗ ಮಹಾಸಭಾ ಮತ್ತು ದಲಿತ ಸಂಘಟನೆಗಳು ಉಗ್ರವಾದ ಹೋರಾಟ ನಡೆಸಲಿವೆ. ಇದರ ವಿರುದ್ಧ ಕ್ರಾಂತಿಯೇ ಪ್ರಾರಂಭವಾಗಲಿದೆ” ಎಂದು ಎಚ್ಚರಿಸಿದರು.

ಜಿಲ್ಲಾ ಮಾದರ ಮಹಾಸಭಾ ಕಾರ್ಯದರ್ಶಿ ತಿರುಕಣ್ಣ ಮಾತನಾಡಿ “ನಮ್ಮ 35 ವರ್ಷದ ಬೇಡಿಕೆ ಮತ್ತು ಹೋರಾಟದ ಫಲವಾಗಿ ಜಾರಿಯಾದ ಒಳಮೀಸಲಾತಿಯಂತೆ ನಮಗೆ ಶೇ. 6 ಒಳಮೀಸಲಾತಿಯಡಿ ನೇಮಕಾತಿ ಮಾಡಿ ಮಾದಿಗ ಸಂಬಂಧಿತ ಜಾತಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮಾರ್ಚ್ 27ರಿಂದ ಉಗ್ರವಾದ ಹೋರಾಟ ಪ್ರಾರಂಭವಾಗಲಿದೆ. ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ” ಎಂದು ಎಚ್ಚರಿಸಿದರು.
ಶಿವಮೊಗ್ಗ | ಬಜೆಟ್ 2026-27ರಲ್ಲಿ ಜಿಲ್ಲೆಗೆ ನೀಡಿದ ಅನುದಾನ ಹಾಗೂ ಘೋಷಣೆಗಳೆಷ್ಟು?ಈ ಸುದ್ದಿ ಓದಿದ್ದೀರಾ?
ಪ್ರತಿಭಟನೆಯಲ್ಲಿ ಮಾದಾರ ಮಹಾಸಭಾ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾ ಮಾದಿಗ ಸಂಬಂಧಿತ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.





