ನಿಟ್ಟೂರಿನಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ತೆರಳುತ್ತಿ ಖಾಸಗಿ ಸ್ಲೀಪರ್ ಬಸ್ ಬೆಂಕಿ ಹೊತ್ತಿ ಧಗಧಗನೆ ಉರಿದು ಸಂಪೂರ್ಣ ಕರಕಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೂಡುರು ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಬಸ್ ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ಗೆ ಸೇರಿದ್ದು ಎನ್ನಲಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಬಸ್ಸುಗಳ ಅಪಘಾತ, ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ತಾನೇ ಚಿತ್ರದುರ್ಗದ ಹಿರಿಯೂರು ಬಳಿ ಸ್ಲೀಪರ್ ಬಸ್ಸಿಗೆ ಲಾರಿ ಎಂದು ಡಿಕ್ಕಿ ಹೊಡೆದು ಏಳು ಜನ ಮೃತಪಟ್ಟ ಘಟನೆ ನೆನಪಿನಲ್ಲಿರುವಾಗಲೇ ಮತ್ತೊಂದು ಸ್ಲೀಪರ್ ಬಸ್ ಬೆಂಕಿ ದುರಂತ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದೆ. ಇದು ಬಸ್ಸುಗಳ ಸುರಕ್ಷತಾ ನಿರ್ವಹಣೆ ಮತ್ತು ಸುರಕ್ಷತೆ ಪಾಲನೆ ಪರಿಶೀಲಿಸುವ ಸರ್ಕಾರದ ನಿಯಮಗಳು ಮತ್ತು ಅಧಿಕಾರಿಗಳ ಮೇಲೆ ಭಾರಿ ಅನುಮಾನ ಮೂಡಿಸಿದೆ.
ನಿಟ್ಟೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸುಮಾರು 40 ಪ್ರಯಾಣಿಕರನ್ನು ಹೊತ್ತ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಮಾರ್ಗಮಧ್ಯೆ ಹೊಸನಗರ ತಾಲೂಕಿನ ಸೂಡುರು ಬಳಿಯ 9ನೇ ಮೈಲುಗಲ್ಲು ಸಮೀಪ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತ್ವರಿತವಾಗಿ ವ್ಯಾಪಿಸಲು ಶುರುವಾದ ಹಿನ್ನೆಲೆಯಲ್ಲಿ ಚಾಲಕ ಅಪಾಯ ಗಮನಿಸಿ ಬಸ್ನ್ನು ಬಲಭಾಗಕ್ಕೆ ತಿರುಗಿಸಿದ್ದಾನೆ.
ಈ ವೇಳೆ ಬಸ್ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಕೂಡಲೇ ಎಚ್ಚೆತ್ತ ಪ್ರಯಾಣಿಕರು ತುರ್ತು ನಿರ್ಗಮನ ದ್ವಾರಗಳು, ಕಿಟಕಿಗಳ ಮೂಲಕ ತ್ವರಿತವಾಗಿ ಹೊರಬಂದರು. ಬಸ್ನಲ್ಲಿ ಸುಮಾರು 36-40 ಪ್ರಯಾಣಿಕರು ಇದ್ದರು ಎನ್ನಲಾಗಿದ್ದು. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ 4ರಿಂದ 5 ಮಂದಿ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಉಪಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಸಿಗುವುದೇ ರಾಜಕೀಯ, ಸಾಮಾಜಿಕ ನ್ಯಾಯ?
ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ದೋಷ ಅಥವಾ ಇತರ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆಯಿಂದ ರಾಜ್ಯದಲ್ಲಿ ಖಾಸಗಿ ಬಸ್ಗಳ ಸುರಕ್ಷತೆಯ ಬಗ್ಗೆ ಇನ್ನೊಮ್ಮೆ ತೀವ್ರ ಚರ್ಚೆ ಹುಟ್ಟುಹಾಕಿದೆ.





