ಪವಿತ್ರ ರಂಜಾನ್ ಮಾಸದ ಅಂಗವಾಗಿ ಶಿವಮೊಗ್ಗ ನಗರದ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಕಛೇರಿಯಲ್ಲಿ ಜಮಾತೆ ಇಸ್ಲಾಂ ಹಿಂದ್, ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ಸಂಜೆ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಮತ್ತು ಶಾಂತಿಯ ಸಂದೇಶವನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಮಹಮ್ಮದ್ ಇಲಿಯಾಜ್, “ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಮಾನತೆ ಮತ್ತು ಪರಸ್ಪರ ಗೌರವ, ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಇದನ್ನೇ ಕುರಾನ್ ಹೇಳುತ್ತದೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ, ಬಡವರಿಗೆ, ಹಸಿದವರಿಗೆ ಸಹಾಯ ಮಾಡುವ ಮೂಲಕ, ಅವರ ನೋವು ಅರಿಯುವ ಪ್ರಯತ್ನ ರಂಜಾನ್ ಹಬ್ಬದ ಉಪವಾಸದ ಮಹತ್ವ. ಸಮಾಜದಲ್ಲಿ ಹಸಿದವರಿಗೆ, ಬಡವರಿಗೆ ಸಹಾಯ ಮಾಡುವ ಮೂಲಕ ಅವರನ್ನು ಬಡತನದಿಂದ ಮೇಲೆತ್ತುವ ಕಾರ್ಯ ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಇದನ್ನೇ ಅಂದು ಪ್ರವಾದಿ ಮಹಮ್ಮದ್ ಪೈಗಂಬರ್ ಮಾಡಿ ತೋರಿಸಿದ್ದರು. ಇಂತಹ ಇಫ್ತಾರ್ ಕೂಟಗಳು ವಿವಿಧ ಸಮುದಾಯಗಳ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುತ್ತವೆ” ಎಂದು ತಿಳಿಸಿದರು.

ನಿವೃತ್ತ ನ್ಯಾಯಾಧೀಶರಾದ ಸೆಲ್ವಕುಮಾರ್ ಮಾತನಾಡಿ “ಸಮಾನತೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸುವ ಅಗತ್ಯವಿದೆ. ಇಂತಹ ಇಫ್ತಾರ್ ಕಾರ್ಯಕ್ರಮವು ಸಮಾಜದಲ್ಲಿ ಸಾಮರಸ್ಯವನ್ನು ಬಲಪಡಿಸುವ ಉತ್ತಮ ಪ್ರಯತ್ನ. ಎಲ್ಲಾ ಧರ್ಮಗಳೂ ಸಮಾನತೆ, ಶಾಂತಿಯನ್ನೇ ಹೇಳುತ್ತವೆ. ಉಪವಾಸದ ಜೊತೆಗೆ ಆತ್ಮ ಶುದ್ಧಿಗಾಗಿ ರಂಜಾನ್ ಅಗತ್ಯ” ಎಂದು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಮೂರ್ತಿ ಮಾತನಾಡಿ, “ಎರಡನೇ ಬಾರಿಗೆ ಇಫ್ತಾರ್ ಕೂಟ ನಮ್ಮ ಕಛೇರಿಯಲ್ಲಿ ಆಯೋಜಿಸುತ್ತಿರುವುದು ಸಂತೋಷ ತಂದಿದೆ. ಬುದ್ಧ, ಬಸವ, ಅಂಬೇಡ್ಕರ್ ಶಾಂತಿಗೆ ಹೆಸರಾದವರು. ಮನುಷ್ಯ ಮನುಷ್ಯರ ಮಧ್ಯೆ ಬಾಂಧವ್ಯ ಇಲ್ಲ. ಸಣ್ಣ ಸಣ್ಣ ಘಟನೆಗಳನ್ನು ಧರ್ಮ ಹಾಗೂ ರಾಜಕೀಕರಣಗೊಳಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ನಿಲ್ಲಬೇಕು. ಅಂಬೇಡ್ಕರ್ ಎಲ್ಲರಿಗೂ ಸಮಾನ ಮತದಾನದ ಹಕ್ಕು ಕೊಡಿಸಿದ್ದಾರೆ. ಆದರೆ ಅವರು ಕಂಡ ಸಮಾನತೆ ಕನಸು ನನಸಾಗಿಲ್ಲ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಶಾಂತಿ ಸಾಧ್ಯ” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾದಿಗ ಸಂಘಟನೆಗಳ ಒಕ್ಕೂಟದಿಂದ ಒಳಮೀಸಲಾತಿಯ ನೇಮಕಾತಿಗೆ ಒತ್ತಾಯಿಸಿ ಬಂದ್
ಕಾರ್ಯಕ್ರಮದಲ್ಲಿ ಮುಖಂಡರಾದ ಅಜಾಜ್, ವಕೀಲ ಲಿಯಾಖತ್, ಜಫ್ರುಲ್ಲಾ ಹಾಗೂ ವಿವಿಧ ಸಮುದಾಯಗಳ ಮುಖಂಡರು, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಮುಸ್ಲಿಂ ಸಮಾಜದ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.





