ಶ್ರಾವಣ ಮಾಸದ ಅಂಗವಾಗಿ ಪಟ್ಟಣ ಸೇರಿ ಬೀದರ್ ಜಿಲ್ಲೆಯಲ್ಲದೇ ನೆರೆಯ ರಾಜ್ಯದ 22 ಕಡೆಗಳಲ್ಲಿ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಸವಕಲ್ಯಾಣ ಅನುಭವ ಮಂಟಪದ ವತಿಯಿಂದ ಪ್ರವಚನ ಆಯೋಜಿಸಲಾಗುತ್ತಿದ್ದು ಜು.24 ರಿಂದ ಎಲ್ಲ ಕಡೆಗಳಲ್ಲಿ ಪ್ರವಚನ
ಉದ್ಘಾಟನೆಗೊಳ್ಳಲಿದೆ. ಮಠಾಧೀಶರು, ಉಪನ್ಯಾಸಕರು, ಸಾಹಿತಿಗಳು, ಶಿಕ್ಷಕರು ವಿವಿಧ ವಿಷಯಗಳ ಮೇಲೆ ಪ್ರವಚನದ ಮೂಲಕ ಜ್ಞಾನದ ದಾಸೋಹ ಉಣಬಡಿಸಲಿದ್ದಾರೆ ಭಕ್ತರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ʼಭಕ್ತರಲ್ಲಿನ ಅಜ್ಞಾನ ಕಳೆದು ಬಸವ ಜ್ಞಾನ, ಬಸವ ಭಕ್ತಿ, ಬಸವ ಬೀಜ ಬಿತ್ತುವುದು, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ
ಸದಾಶಯದೊಂದಿಗೆ ಜಿಲ್ಲೆಯ ವಿವಿಧೆಡೆ ಶ್ರಾವಣ ಮಾಸ ಪ್ರವಚನದ ಏರ್ಪಡಿಸಲಾಗುತ್ತಿದೆ. ಜಿಲ್ಲೆಯ ಸದ್ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದು ಕೊಳ್ಳಬೇಕು’ ಎಂದು ತಿಳಿಸಿದ್ದಾರೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಭಾಲ್ಕಿ ಪಟ್ಟಣದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಿಂಗಳ ಪರ್ಯಂತ ನಡೆಸಿ ಕೊಡುವ ವಚನ ದರ್ಶನ ಪ್ರವಚನದ ಜತೆಗೆ ಬಸವ ಪಂಚಮಿ, ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ, ಸುದೈವಿ ಮಕ್ಕಳ ಜನ್ಮದಿನ ಸೇರಿದಂತೆ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಲಿವೆʼ ಎಂದು ಹೇಳಿದರು.
ʼಭಾಲ್ಕಿ ಪಟ್ಟಣದಲ್ಲಿ ಕಳೆದ ನಾಲ್ಕು ದಶಕಗಳಿಂದ ಶ್ರಾವಣ ಮಾಸದಲ್ಲಿ ನಿರಂತರವಾಗಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪ್ರವಚನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಬಸವಲಿಂಗ ಪಟ್ಟದ್ದೇವರು ಬಸವಾದಿ ಶರಣರ ಕುರಿತು ಕಳೆದ ನಾಲ್ಕು ದಶಕದಿಂದ ಪ್ರವಚನ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿಯು ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಪೂಜ್ಯರು ಪ್ರತಿದಿನ ವಚನ ದರ್ಶನ ವಿಷಯದ ಮೇಲೆ ಬೆಳಕು ಚೆಲ್ಲಲ್ಲಿದ್ದಾರೆʼ ಎಂದು ಮಾಹಿತಿ ನೀಡಿದರು.
ಜು.25ಕ್ಕೆ ಪ್ರವಚನ ಉದ್ಘಾಟನೆಗೊಳ್ಳಲಿದ್ದು ಪ್ರತಿದಿನ ಸಾಯಂಕಾಲ 6 ರಿಂದ 7 ಗಂಟೆ ವರೆಗೆ ಪ್ರವಚನದ ಮೂಲಕ ಅಧ್ಯಾತ್ಮದ ಜ್ಞಾನವನ್ನು ಧಾರೆಯೆರಿಯಲ್ಲಿದ್ದಾರೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಆಪರೇಷನ್ ಸಿಂಧೂರ, ಪಹಲ್ಗಾಮ್ ದಾಳಿ ಬಗ್ಗೆ ಲೋಕಸಭೆಯಲ್ಲಿ 16 ಗಂಟೆಗಳ ಚರ್ಚೆಗೆ ಕೊನೆಗೂ ಸರ್ಕಾರ ಅಸ್ತು
ಸುದ್ದಿಗೋಷ್ಠಿಯಲ್ಲಿ ಮಹಾಲಿಂಗ ಸ್ವಾಮೀಜಿ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಗುಂಡಪ್ಪ ಸಂಗಮಕರ್ ಇದ್ದರು





