ಸಿದ್ದಾಪುರ: ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಮೂರು ಕೋಟಿ ಕ್ಕಿಂತ ಅಧಿಕ ಮೊತ್ತದ ಹಣವನ್ನು ಗ್ರಾಹಕರ ಖಾತೆಗಳಿಂದ ಅಕ್ರಮವಾಗಿ ವರ್ಗಾಯಿಸಿದ ಮಹಾ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕಿನ ಗ್ರಾಹಕ ಸೇವಾ ಸಹಾಯಕನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕಿನ ಶಾಖಾ ಪ್ರಬಂಧಕರಾದ ಶಂಭುಲಿಂಗ ಪರಮೇಶ್ವರ ಭಟ್ ಅವರು ಆಂತರಿಕ ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಅವರು ಮಂಜುನಾಥ ಶ್ರೀಧರ ಭಟ್ (34) ಎಂಬ ಸಿಬ್ಬಂದಿ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಈ ಘಟನೆ ಬ್ಯಾಂಕ್ ವಲಯದಲ್ಲಿ ಆಘಾತ ಮೂಡಿಸಿದೆ.
ಆಪಾದಿತ ಮಂಜುನಾಥ ಭಟ್ 2013ರಲ್ಲಿ ಬ್ಯಾಂಕ್ ಸೇವೆಗೆ ಸೇರಿದ್ದು, 2023ರಿಂದ ಸಿದ್ದಾಪುರದ ನೂತನ ಶಾಖೆಯಲ್ಲಿ ಗ್ರಾಹಕ ಸೇವಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅವನು 2024ರ ಸೆಪ್ಟೆಂಬರ್ 11ರಿಂದ 2025ರ ಸೆಪ್ಟೆಂಬರ್ 23ರವರೆಗೆ ವಿವಿಧ ಗ್ರಾಹಕರ ಖಾತೆಗಳಿಂದ ಹಣವನ್ನು ಹಂತ ಹಂತವಾಗಿ 3,51,84,349, ರೂಪಾಯಿ ಹಣವನ್ನು ಅಕ್ರಮವಾಗಿ ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿರುವುದು ದೃಢಪಟ್ಟಿದೆ.
ಪ್ರಕರಣದ ಹಿನ್ನೆಲೆ: ಸೆಪ್ಟೆಂಬರ್ 29, 2025 ರಂದು ಗ್ರಾಹಕರೊಬ್ಬರು ತಮ್ಮ ಟರ್ಮ್ ಡೆಪಾಸಿಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ ಆಗ ಬ್ಯಾಂಕಿನ ಬೇರೆ ಸಿಬ್ಬಂದಿ ಅವರ ಖಾತೆಯನ್ನು ಪರಿಶೀಲಿಸಿದಾಗ ಠೇವಣಿ ಮೊತ್ತ ಖಾಲಿಯಾಗಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ. ಆ ಠೇವಣಿಯನ್ನು 2024ರ ಸೆಪ್ಟೆಂಬರ್ 24ರಂದು ಮುಚ್ಚಿ, ಗ್ರಾಹಕರ ಜಮಾ ಖಾತೆಗೆ 4,40,561/- ಜಮಾ ಮಾಡಲಾಗಿದೆ. ಅಲ್ಲಿಂದ 4,40,500/- ಅನ್ನು ಆರೋಪಿತನ ವೈಯಕ್ತಿಕ ಖಾತೆಗೆ RTGS ಮೂಲಕ ವರ್ಗಾಯಿಸಿ ಕೊಂಡಿದ್ದು ಪತ್ತೆಯಾಗಿದೆ. ಆರೋಪಿತನು ತಾನು ಬ್ಯಾಂಕ್ ಸಿಬ್ಬಂದಿ ಎಂಬ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಗ್ರಾಹಕರ ಠೇವಣಿಗಳನ್ನು ಮುಂಚಿತವಾಗಿ ಮುಚ್ಚಿ, ಎಸ್ಎಂಎಸ್ (SMS) ಗ್ರಾಹಕರ ಮೋಬೈಲ್ ಗೆ ಹೋಗದಂತೆ ಆ ಸೇವೆಗಳನ್ನು ನಿಷ್ಕ್ರಿಯಗೊಳಿಸಿ, ನಕಲಿ ಠೇವಣಿ ರಸೀದಿಗಳನ್ನು ಮುದ್ರಿಸಿ ಗ್ರಾಹಕರಿಗೆ ನೀಡುತ್ತಿದ್ದನು. ಮುಖ್ಯವಾಗಿ ಹಿರಿಯ ನಾಗರಿಕರು ಮತ್ತು ಪರಿಚಿತ ಗ್ರಾಹಕರೇ ಅವನ ವಂಚನೆಗೆ ಗುರಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪರವಾನಗಿ ಇಲ್ಲದೆ ಮರಳು ಸಂಗ್ರಹ; ಅಧಿಕಾರಿಗಳ ವಿರುದ್ಧ ಜನಾಕ್ರೋಶ
ಬ್ಯಾಂಕಿನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು: ಆರೋಪಿತ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಇತರರ ಪಾತ್ರವಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರ ಹಣಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಬ್ಯಾಂಕ್ ಕಾನೂನು ಪ್ರಕ್ರಿಯೆ ಕೈಗೊಂಡಿದೆ. ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಹಣ ಮರುಪಾವತಿ ಮಾಡಲು ಆಡಳಿತ ಮಂಡಳಿಯ ಅನುಮೋದನೆ ಅಗತ್ಯವಿದ್ದು, 1 ರಿಂದ 15 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.ವಂಚನೆಗೆ ಬಳಕೆಯಾದ ಲಾಗಿನ್ಗಳನ್ನು ಉಪಯೋಗಿಸಿದ ಇಬ್ಬರು ಸಿಬ್ಬಂದಿಯನ್ನು ಈಗಾಗಲೇ ಬೇರೆ ಶಾಖೆಗೆ ವರ್ಗಾಯಿಸಲಾಗಿದೆ.”ಇತರರ ಲಾಗಿನ್ ಮಾಹಿತಿ ಹಂಚಿಕೊಂಡಿರುವುದು ಗಂಭೀರ ಕರ್ತವ್ಯ ಲೋಪ,” ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.





