ಪತಿ-ಪತ್ನಿಯ ನಡುವಿನ ಜಗಳವನ್ನು ಶಮನಗೊಳಿಸಲು ಮುಂದಾದ ಚಿಕ್ಕಪ್ಪನನ್ನೇ ಯುವಕರ ಗುಂಪೊಂದು ಚಾಕು ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಘಟನೆಯ ಹಿನ್ನೆಲೆ: ಅವರಗುಪ್ಪ ಗ್ರಾಮದ ವಸಂತ್ ನಾಯ್ಕ (41) ಮೃತಪಟ್ಟ ದುರ್ದೈವಿ ಆಗಿದ್ದಾರೆ. ಆರೋಪಿ ಮಹಿಳೆ ಸುಚಿತ್ರಾ ತನ್ನ ಪತಿಯಿಂದ ದೂರವಾಗಿ ಶಿವಮೊಗ್ಗದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಎಂಬುವರ ಕಚೇರಿಯಲ್ಲಿ ಕೆಲಸ ಮಾಡುತ್ತಾ, ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದಳು.
ಆದರೆ, ತಾಯಿ ಮತ್ತು ಜ್ಯೋತಿಷಿಯ ನಡುವಿನ ನಡವಳಿಕೆಯ ಬಗ್ಗೆ ಮಗಳು ಅಸಮಾಧಾನ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯವಾಗಿ ತಾಯಿ ಮತ್ತು ಜ್ಯೋತಿಷಿಯಿಂದ ಕಿರುಕುಳ ಅನುಭವಿಸಿದ ಮಗಳು, ಯಾರಿಗೂ ತಿಳಿಸದೆ ಸಿದ್ದಾಪುರದಲ್ಲಿದ್ದ ತಂದೆ ಮಹೇಶ್ ಅವರ ಬಳಿಗೆ ಬಂದು, ಚಿಕ್ಕಪ್ಪ ವಸಂತ್ ನಾಯ್ಕ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಳು.
ಮಗಳನ್ನು ಹುಡುಕಿಕೊಂಡು ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಕೆಲವು ಯುವಕರೊಂದಿಗೆ ಅವರಗುಪ್ಪಕ್ಕೆ ಬಂದಿದ್ದಾಳೆ. ಈ ವೇಳೆ ಪತಿ ಮಹೇಶ್ ಮತ್ತು ಸುಚಿತ್ರಾ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳದ ಸಂದರ್ಭದಲ್ಲಿ ಜ್ಯೋತಿಷಿಯ ಕಾರು ಜಖಂಗೊಂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಗಲಾಟೆ ಬಿಡಿಸಲು ವಸಂತ್ ನಾಯ್ಕ ಅವರು ಮಧ್ಯಪ್ರವೇಶಿಸಿದಾಗ, ಸುಚಿತ್ರಾ ಜೊತೆ ಬಂದಿದ್ದ ಯುವಕರ ಗುಂಪು ಅವರ ಮೇಲೆ ಚಾಕು ಇರಿದಿದೆ. ಇದೇ ವೇಳೆ ಪತಿ ಮಹೇಶ್ ಹಾಗೂ ನೆರೆಮನೆಯ ಕುಮಾರ್ ಎಂಬುವವರಿಗೂ ಚಾಕು ಇರಿಯಲಾಗಿದ್ದು, ವಸಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಾತ್ರಾ ಮಹೋತ್ಸವಗಳಲ್ಲೂ ಜೂಜಿನ ಕರಿನೆರಳು; ಬೀಳಬೇಕಿದೆ ಬ್ರೇಕ್
ಗಂಭೀರ ಗಾಯಗೊಂಡಿರುವ ಮಹೇಶ್ ಮತ್ತು ಕುಮಾರ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮೃತರ ಅತ್ತಿಗೆ ಸಂಧ್ಯಾ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳಾದ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಲೋಕನಾಥ್ ಸೇರಿದಂತೆ ಒಟ್ಟು ಏಳು ಜನರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಹೆಚ್ಚಿನ ಸತ್ಯಾಸತ್ಯತೆ ಹೊರಬರಬೇಕಿದೆ.





