ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಇಕೋ ಕ್ಲಬ್ ಅಡಿಯಲ್ಲಿ ತಾವು ನಾಟಿ ಮಾಡಿದ್ದ ಭತ್ತದ ಗದ್ದೆಯನ್ನು ಯಶಸ್ವಿಯಾಗಿ ಕೊಯ್ಲು ಮಾಡುವ ಮೂಲಕ ಸಂಪೂರ್ಣ ಕೃಷಿ ಅಧ್ಯಯನ ನಡೆಸಿದರು.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತಾವೇ ನಾಟಿ ಮಾಡಿದ್ದ ಭತ್ತದ ಸಸಿಯ ಕೊಯ್ಲು ಕಾರ್ಯವನ್ನು ಮಾಡಿ, ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯ ಕೊನೆಯ ಹಂತದ ಅನುಭವವನ್ನು ಪಡೆದುಕೊಂಡರು. ಈ ಶಾಲೆಯು ಪ್ರತಿ ವರ್ಷವೂ ಕೃಷಿ ಅಧ್ಯಯನವನ್ನು ನಡೆಸುತ್ತಿದ್ದು, ಈ ಬಾರಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊಡಗಿನ ಕೆ ಎಚ್ ಬಿ 11 (KHB 11) ಎಂಬ ಭತ್ತದ ತಳಿಯನ್ನು ನಾಟಿ ಮಾಡಲಾಗಿತ್ತು.
ವಂದಾನೆಯ ಪ್ರಗತಿಪರ ಕೃಷಿಕರಾದ ನಾಗರಾಜ ಶ್ರೀನಿವಾಸ ಶಾನಭಾಗ ಅವರು ಭತ್ತದ ಬೀಜವನ್ನು ನೀಡಿ ಮಕ್ಕಳ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದರು. ಬಿಳಗಿಯ ಪ್ರಗತಿಪರ ಕೃಷಿಕ ರವಿಲೋಚನ ಮಡಗಾಂವಕರ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಕೊಯ್ಲು ಮಾಡಿದ ಈ ತಳಿಯ ಭತ್ತವು ಸಣ್ಣಕ್ಕಿಯಾಗಿದ್ದು, ಪೈರು ಸರಾಸರಿ 98 ಸೆಂ.ಮೀ.ನಿಂದ 113 ಸೆಂ.ಮೀ. ವರೆಗೆ ಎತ್ತರವಾಗಿ ಬೆಳೆದು ಅಧಿಕ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಮಲೆನಾಡಿನ ಈ ಪ್ರದೇಶದ ಮಣ್ಣಿಗೆ ಈ ತಳಿಯು ಸರಿಯಾಗಿ ಹೊಂದಾಣಿಕೆ ಆಗುತ್ತದೆ. ಅಲ್ಲದೆ, ಇದರಿಂದ ಉತ್ತಮ ಗುಣಮಟ್ಟದ ಅಕ್ಕಿಯನ್ನು ಪಡೆಯಬಹುದಾಗಿದೆ.
ವಿದ್ಯಾರ್ಥಿಗಳು ನಾಟಿ ಮಾಡಿದ ಈ ಸಸಿಯ ಪೈರಿನಲ್ಲಿ ಸರಾಸರಿ 182 ಭತ್ತದ ಕಾಳುಗಳು ಕಂಡುಬಂದಿರುವುದು ವಿಶೇಷವಾಗಿತ್ತು. ಸುಮಾರು 4 ಗುಂಟೆ ಕ್ಷೇತ್ರದಲ್ಲಿ ಶಾಲೆಯ 5 ರಿಂದ 7ನೇ ತರಗತಿಯ ಒಟ್ಟು 17 ವಿದ್ಯಾರ್ಥಿಗಳು ಕೇವಲ ಒಂದೂವರೆ ತಾಸಿನಲ್ಲಿ ಕೊಯ್ಲು ಕಾರ್ಯವನ್ನು ತುಂಬಾ ಸಲೀಸಾಗಿ ಪೂರ್ಣಗೊಳಿಸಿ ತಮ್ಮ ಕೃಷಿ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಮೂಲಕ ವಿದ್ಯಾರ್ಥಿಗಳು ಈ ಭಾಗದ ರೈತರಿಗೆ ಕೊಡಗಿನ ಈ ಹೈಬ್ರೀಡ್ ಭತ್ತದ ತಳಿಯನ್ನು ಪರಿಚಯಿಸುತ್ತ, ಕೃಷಿಯನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಿದಂತಾಯಿತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಲೋಕ ಅದಾಲತ್ ಮೂಲಕ 47,179 ಪ್ರಕರಣ ಇತ್ಯರ್ಥ; ₹ 82.62 ಕೋಟಿ ಹಣ ಸಂಗ್ರಹ
ಕೊಯ್ಲು ಕಾರ್ಯಕ್ಕೆ ಮುನ್ನ, ಹೆಮಜೆನಿಯ ಹಿರಿಯರಾದ ಲಕ್ಷ್ಮಣ ಭೈರ್ಯ ಗೌಡ ಅವರು ಕತ್ತಿ ಹಾಗೂ ಪೈರಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲೋಕೇಶ ಪದ್ಮನಾಭ ಗೌಡ, ಜಗದೀಶ ಪದ್ಮನಾಭ ಗೌಡ ಹಾಗೂ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಅವರು ಉಪಸ್ಥಿತರಿದ್ದರು.





