ಸಿದ್ದಾಪುರ: ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಅವರಿಂದ ಹಣ ಹಾಗೂ ಬಂಗಾರದ ಆಭರಣಗಳನ್ನು ದೋಚಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಹೊಸ ಕಾನೂನು ಬಿ.ಎನ್.ಎಸ್ (BNS) ಅಡಿಯಲ್ಲಿ ಕೇವಲ 5–6 ತಿಂಗಳ ಅಲ್ಪ ಅವಧಿಯಲ್ಲಿ ಸಾಕ್ಷಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಹೊರಬಿದ್ದಿರುವುದು ವಿಶೇಷವಾಗಿದೆ.
ಪ್ರಕರಣದ ಹಿನ್ನೆಲೆ: ಸಿದ್ದಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೊರಬ ರಸ್ತೆಯ ನಿವಾಸಿ ಗೀತಾ ಪ್ರಭಾಕರ ಹುಂಡೇಕರ ಅವರು ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಗಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.
ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಪ್ರತಿದಿನ ಪಿಗ್ಗಿ ಹಣ ಸಂಗ್ರಹಿಸುತ್ತಿದ್ದ ವಿಷಯವನ್ನು ತಿಳಿದಿದ್ದ ಆರೋಪಿ ಅಭಿಜಿತ ಗಣಪತಿ ಮಡಿವಾಳ ಹಣದ ಆಸೆಯಿಂದ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. 2024 ಡಿಸೆಂಬರ್ 23ರಂದು ರಾತ್ರಿ ಸುಮಾರು 10.15 ಗಂಟೆಗೆ ಆರೋಪಿಯು ಗೀತಾ ಅವರ ಮನೆಯ ಹಿಂಭಾಗದ ಹಂಚನ್ನು ತೆಗೆದು ಒಳನುಗ್ಗಿದ್ದನು.
ಮನೆಯೊಳಗೆ ಅತಿಕ್ರಮಣವಾಗಿ ಪ್ರವೇಶ ಮಾಡಿದ ಆತ, ಗೀತಾ ಅವರ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಬಳಿಕ ಮೃತಳ ಕಿವಿಯಲ್ಲಿದ್ದ ಬಂಗಾರದ ಓಲೆಗಳು, ರೋಲ್ಡ್ ಗೋಲ್ಡ್ ಬಳೆಗಳು ಹಾಗೂ ಪಿಗ್ಗಿಯಿಂದ ಸಂಗ್ರಹಿಸಿದ್ದ ₹21,680 ಹಣವನ್ನು ದೋಚಿ ಪರಾರಿಯಾಗಿದ್ದನು.
ನ್ಯಾಯಾಲಯದ ತೀರ್ಪು: ಸಿದ್ದಾಪುರ ಪೊಲೀಸ್ ನಿರೀಕ್ಷಕರಾದ ಜೆ.ಬಿ. ಸೀತಾರಾಮ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕರಾದ ರಾಜೇಶ್ ಎಂ. ಮಳಗಿಕರ್ ಅವರು ವಾದ ಮಂಡಿಸಿ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕುಮಟಾ | ಗ್ರಾಮಸ್ಥರ ಹೋರಾಟಕ್ಕೆ ಜಯ; ಮಿರ್ಜಾನ ಕೋಟೆ ರಸ್ತೆಗೆ ಗೇಟ್ ಅಳವಡಿಕೆ ನಿರ್ಧಾರ ಕೈಬಿಟ್ಟ ಪಂಚಾಯತ್.
ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ ಆರೋಪಿತನ ಮೇಲಿನ ದೋಷ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಆರೋಪಿಯಾದ ಅಭಿಜಿತ ಗಣಪತಿ ಮಡಿವಾಳನಿಗೆ ಜೀವಾವಧಿ ಶಿಕ್ಷೆ ಹಾಗೂ ₹32,000 ದಂಡ ವಿಧಿಸಲಾಗಿದೆ.
ಅಲ್ಲದೆ, ಮೃತರ ಅವಲಂಬಿತ ಮಕ್ಕಳಿಗೆ ₹50,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರದಿಂದಲೂ ಪರಿಹಾರ ಪಡೆಯಬಹುದೆಂದು ನ್ಯಾಯಾಲಯ ತಿಳಿಸಿದೆ.
ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸುವಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ಗಣಪತಿ ಭಟ್ ಅವರು ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದಾರೆ.





