ಸಿದ್ದಾಪುರ: “ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ, ಪುಸ್ತಕದ ಜ್ಞಾನದ ಜೊತೆಗೆ ಪ್ರತ್ಯಕ್ಷ ಅನುಭವ ಪಡೆಯಲು ಹುಲ್ಕುತ್ರಿ ಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ದರ್ಶನ ಮಾಡಿದ್ದಾರೆ.
ತಾಲೂಕಿನ ಸೋವಿನಕೊಪ್ಪ ಪಂಚಾಯತ್ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ನಾಲ್ಕು ವರ್ಷಗಳಲ್ಲಿ ಇಡೀ ಕರ್ನಾಟಕದ ಐತಿಹಾಸಿಕ ತಾಣಗಳನ್ನು ಸಂದರ್ಶಿಸುವ ಮೂಲಕ ಪ್ರಸಿದ್ಧ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಂಡಿದ್ದಾರೆ.
ಕೇವಲ ಪಠ್ಯಪುಸ್ತಕದ ಪುಟಗಳಿಗೆ ಸೀಮಿತವಾಗಿದ್ದ ಇತಿಹಾಸದ ಸಾಮ್ರಾಜ್ಯಗಳನ್ನು ಕಣ್ಣಾರೆ ಕಂಡು ಅನುಭವಿಸುವ ನಿಟ್ಟಿನಲ್ಲಿ ಶಾಲೆಯು ಕೈಗೊಂಡ ಈ ಶೈಕ್ಷಣಿಕ ಪ್ರವಾಸವು ಈಗ ಜಿಲ್ಲೆಯ ಗಮನ ಸೆಳೆದಿದೆ. 2022-23ನೇ ಸಾಲಿನಿಂದ ಆರಂಭವಾದ ಈ ಸರಣಿ ಪ್ರವಾಸದಲ್ಲಿ 6 ಮತ್ತು 7ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಬರುವ ಬಹುತೇಕ ಎಲ್ಲಾ ಪ್ರಮುಖ ರಾಜಮನೆತನಗಳ ಸ್ಮಾರಕಗಳನ್ನು ಮಕ್ಕಳು ಸಂದರ್ಶಿಸಿದ್ದಾರೆ.
ವಿದ್ಯಾರ್ಥಿಗಳು ಬಾದಾಮಿ ಚಾಲುಕ್ಯರ ಗುಹಾಂತರ ದೇವಾಲಯಗಳು, ಐಹೊಳೆ, ಪಟ್ಟದಕಲ್ಲು, ಮಹಾಕೂಟ ಹಾಗೂ ಹೊಯ್ಸಳರ ವಾಸ್ತುಶಿಲ್ಪದ ಬೇಲೂರು, ಹಳೆಬೀಡು ಮತ್ತು ಶ್ರವಣಬೆಳಗೊಳದ ಗೊಮ್ಮಟೇಶ್ವರನ ದರ್ಶನ ಪಡೆದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಹಂಪಿ, ಚಿತ್ರದುರ್ಗದ ಏಳು ಸುತ್ತಿನ ಕೋಟೆ, ಮೈಸೂರು ಅರಮನೆ ಹಾಗೂ ಕಲ್ಯಾಣಿ ಚಾಲುಕ್ಯರ ಇಟಗಿ ಮಹಾದೇವ ದೇವಾಲಯಗಳನ್ನು ವೀಕ್ಷಿಸಿ ಅಲ್ಲಿನ ಇತಿಹಾಸದ ಬಗ್ಗೆ ಮನದಟ್ಟು ಮಾಡಿಕೊಂಡಿದ್ದಾರೆ.
ಈ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಹಮನಿ ಸಾಮ್ರಾಜ್ಯದ ಕುರುಹಾದ ವಿಜಯಪುರದ ಗೋಲಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಇತಿಹಾಸದ ಪಠ್ಯಕ್ರಮಕ್ಕೆ ಒಂದು ಪೂರ್ಣತೆಯನ್ನು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ₹210 ಕೋಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಕರಾವಳಿ–ಮಲೆನಾಡಿಗೆ ಹೊಸ ಪ್ರವಾಸೋದ್ಯಮ ನೀತಿ: ಡಿಕೆ ಶಿವಕುಮಾರ್
ಜಲಾಶಯ ಹಾಗೂ ಸಾಂಸ್ಕೃತಿಕ ತಾಣಗಳ ಭೇಟಿ: ಐತಿಹಾಸಿಕ ಸ್ಮಾರಕಗಳ ಜೊತೆಗೆ ಆಲಮಟ್ಟಿ, ಕೆ.ಆರ್.ಎಸ್ ಮತ್ತು ತುಂಗಭದ್ರಾ ಜಲಾಶಯಗಳ ತಾಂತ್ರಿಕತೆಯನ್ನು ವಿದ್ಯಾರ್ಥಿಗಳು ಅರಿತಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯ, ಸೇಂಟ್ ಫಿಲೋಮಿನಾ ಚರ್ಚ್ ಹಾಗೂ ಹನುಮಂತನ ಜನ್ಮಸ್ಥಳವೆನ್ನಲಾದ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡಿ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಂಡಿದ್ದಾರೆ.
ಪಾಲಕರ ಸಹಭಾಗಿತ್ವದೊಂದಿಗೆ ಯಶಸ್ವಿ ಪಯಣ: ಕಡಿಮೆ ವಿದ್ಯಾರ್ಥಿಗಳಿರುವ ಕಾರಣ, ಶಾಲೆಯು ಪಾಲಕರನ್ನೂ ಈ ಪ್ರವಾಸದಲ್ಲಿ ಒಳಗೊಳ್ಳುವಂತೆ ಮಾಡಿದ್ದು ಒಂದು ವಿಶೇಷತೆಯಾಗಿದೆ. ಇದರಿಂದ ಮಕ್ಕಳ ಜೊತೆಗೆ ಪೋಷಕರಿಗೂ ಕರ್ನಾಟಕದ ವೈಭವವನ್ನು ನೋಡುವ ಅವಕಾಶ ಲಭಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 3800 ಕಿ.ಮೀ ದೂರವನ್ನು ಕ್ರಮಿಸಿರುವ ಈ ತಂಡ, ಸರಿಸುಮಾರು 3,60,000 ರೂಪಾಯಿಗಳನ್ನು ವ್ಯಯಿಸಿ ಶೈಕ್ಷಣಿಕ ಪ್ರವಾಸಕ್ಕೆ ನಿಜವಾದ ಅರ್ಥವನ್ನು ತಂದುಕೊಟ್ಟಿದೆ.
ಇತಿಹಾಸದ ಎಲ್ಲಾ ಪ್ರಮುಖ ಸಾಮ್ರಾಜ್ಯಗಳ ನೆಲೆಗಳಿಗೆ ಭೇಟಿ ನೀಡಿದ ಸಿದ್ದಾಪುರ ತಾಲೂಕಿನ ಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೆ ಹುಲ್ಕುತ್ರಿ ಶಾಲೆ ಪಾತ್ರವಾಗಿದೆ. ಶಾಲೆಯ ಮುಖ್ಯ ಶಿಕ್ಷಕ ದರ್ಶನ ಹರಿಕಂತ ಅವರ ಈ ದೂರದೃಷ್ಟಿ ಹಾಗೂ ಪೋಷಕರ ಸಹಕಾರದಿಂದ ಮಕ್ಕಳು ಪುಸ್ತಕದ ಜ್ಞಾನದೊಂದಿಗೆ ಪ್ರತ್ಯಕ್ಷ ಅನುಭವವನ್ನೂ ಪಡೆದುಕೊಂಡಿದ್ದಾರೆ.





