ಮೈಸೂರು ಜಿಲ್ಲೆ, ಕೃಷ್ಣರಾಜ ನಗರದಲ್ಲಿ ಭಾನುವಾರ ನಡೆದ ನಾಮಧಾರಿ ಗೌಡ ಸಮುದಾಯ ಭವನದ 25ನೇ ವರ್ಷದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ನಾಮಧಾರಿ ಗೌಡ ಸಮುದಾಯವನ್ನು ಪ್ರವರ್ಗ 2ಎ ಸೇರಿಸುವ ಪ್ರಯತ್ನಕ್ಕೆ ಪ್ರಾಮಾಣಿಕವಾಗಿ ಬೆಂಬಲಿಸುವೆ ಎಂದು ಭರವಸೆ ನೀಡಿದರು.
ಸಮುದಾಯದ ಮುಖಂಡರು ಸಂಪೂರ್ಣ ಮಾಹಿತಿಯೊಡನೆ ನನ್ನ ಬಳಿ ಬನ್ನಿ, ಅದರ ಅನುಸಾರ ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿರುವ ಅರ್ಜಿ, ಬೇಡಿಕೆಗಳ ಅನುಸಾರ ಮೀಸಲಾತಿ ಹೊಂದುವ ಪ್ರಯತ್ನ ಮಾಡುತ್ತೇನೆ. ಸಮುದಾಯವು ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಬೇಕಿದೆ, ಮುಂಬರುವ ದಿನಗಳ ರಾಜಕೀಯ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಅನೇಕ ಸಮುದಾಯಗಳಿಗೆ ಜೆಡಿಎಸ್ ನಲ್ಲಿ ಅವಕಾಶಗಳ ಬಾಗಿಲು ಸದಾ ತೆರೆದಿರುತ್ತದೆ. ಹಿಂದುಳಿದ ವರ್ಗಗಳ ನಾಯಕರು ಎಂದೇಳುವ ಬಹುತೇಕರು ದೇವೇಗೌಡರು ಬೆಳೆಸಿದ್ದು ಎನ್ನುವುದನ್ನು ಮರೆಯುವಂತಿಲ್ಲ. ಯಾವುದೇ ಆತಂಕ ಬೇಡ, ಮುಂದಿನ ಬಾರಿ ಸಮುದಾಯದ ಒಬ್ಬರನ್ನು ಎಂಎಲ್ಸಿ ಮಾಡಲಾಗುವುದು. ಇದರ ಮೂಲಕ ಸಮುದಾಯಕ್ಕೆ ಶಕ್ತಿ ನೀಡಲಾಗುವುದು. ಯುವಕರು ಹೆಚ್ಚು ಹೆಚ್ಚಾಗಿ ರಾಜಕಾರಣಕ್ಕೆ ಬರಬೇಕು, ಬೆಂಬಲಿಸಬೇಕು ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ‘ಫಿಟ್ ಮೈಸೂರು-ಸಾಮೂಹಿಕ ಆರೋಗ್ಯ ಹಾಗೂ ಜಾಗೃತಿಕ ನಡಿಗೆ’
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್, ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮುಖಂಡರಾದ ಅಶೋಕ್ ಕುಮಾರ್ ಸೇರಿದಂತೆ ಹಲವರು ಇದ್ದರು.





