ರಾಜ್ಯದಲ್ಲಿ ಯುವಜನರ ಹಿತಾಸಕ್ತಿ ರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸಾಲಿಡಾರಿಟಿ ಯೂತ್ ಮೂವಮೆಂಟ್ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರು ವಾಸವಾಗಿದ್ದು, ಶಿಕ್ಷಣ, ಉದ್ಯೋಗ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಜನರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉದ್ಯೋಗಾವಕಾಶಗಳ ಕೊರತೆ, ಸೂಕ್ತ ಮಾರ್ಗದರ್ಶನದ ಅಭಾವ ಮತ್ತು ನಾಯಕತ್ವ ಅಭಿವೃದ್ಧಿಯಲ್ಲಿ ಯುವಜನರ ಭವಿಷ್ಯವನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯುವಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ಅವರ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಮಟ್ಟದ ಯುವಜನ ಆಯೋಗ ಸ್ಥಾಪನೆ ಅಗತ್ಯವಾಗಿದೆ. ಈ ಆಯೋಗವು ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ನಾಯಕತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ ಯುವಜನರು ನಿರುದ್ಯೋಗ, ಮಾನಸಿಕ ಒತ್ತಡ, ಮಾದಕ ವ್ಯಸನ, ಸೈಬರ್ ವಂಚನೆ, ಸಾಮಾಜಿಕ ಅಸುರಕ್ಷತೆ ಕೊರತೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 2022 ರಿಂದ ನವೆಂಬರ್ 2025 ರವರೆಗೆ ಕರ್ನಾಟಕದಲ್ಲಿ ಒಟ್ಟು 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬಹುಪಾಲು ಪ್ರಕರಣಗಳು ಯುವಜನರಿಗೆ ಸಂಬಂಧಪಟ್ಟಿವೆ. ಅಧ್ಯಯನಗಳ ಪ್ರಕಾರ ಸುಮಾರು 30 ಶೇಕಡ ರಷ್ಟು ಯುವಜನರು ಮಾನಸಿಕ ಆರೋಗ್ಯ ಸಮಸ್ಯೆಗಳು ಅಥವಾ ದೀರ್ಘಕಾಲದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ
ಕೇರಳ, ಅಸ್ಸಾಂ, ಮಿಜೋರಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಯುವಜನರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುತ್ತಿವೆ. ಯುವಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ಅವರ ಹಿತಾಸಕ್ತಿ ರಕ್ಷಿಸಲು ರಾಜ್ಯಮಟ್ಟದ ಯುವ ಆಯೋಗ ಅತ್ಯಗತ್ಯವಾಗಿದೆ.
ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಯುವಜನರ ಹಿತಾಸಕ್ತಿ ರಕ್ಷಣೆ, ಮಾನಸಿಕ ಆರೋಗ್ಯ, ಉದ್ಯೋಗಾವಕಾಶ ಸೇರಿದಂತೆ ಯುವಜನರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲು ಉದ್ದೇಶಕ್ಕಾಗಿ ರಾಜ್ಯ ಸರಕಾರ ಯುವ ಆಯೋಗದ ಸ್ಥಾಪನೆಗೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಹಾತ್ಮಗಾಂಧಿ ಹೆಸರು ಅಳಿಸಲು ಬಿಜೆಪಿ-ಆರ್ಎಸ್ಎಸ್ ಯತ್ನ; ಶರಣಪ್ರಕಾಶ ಪಾಟೀಲ್
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಡಾ. ವಸೀಂ, ತಾಲೂಕು ಅಧ್ಯಕ್ಷರಾದ ಅಬುಲೈಸ್ ನಾಯಕ್, ಮನುಜ ಮತ ಬಳಗದ ಮುಖಂಡ ಬಸವರಾಜ ಬಾದರ್ಲಿ, ಕೆವಿಎಸ್ ವಿದ್ಯಾರ್ಥಿ ಸಂಘಟನೆಯ ಮುಖಂಡ ಚಾಂದ್ ಪಾಷ, ಯುವ ಮುಖಂಡ ಸೊಹೈಲ್ ದೇಸಾಯಿ, ಸಂಘಟನೆಯ ತಾಲೂಕು ಉಪಾಧ್ಯಕ್ಷರಾದ ಇಸ್ಮಾಯಿಲ್, ಕಾರ್ಯದರ್ಶಿಗಳಾದ ನಯಿಮ್ ಇರ್ಫಾನ್, ಮುಸ್ತಾಕ್, ಅಝರ್, ಶಬೀರ್, ಆಸಿಫ್, ಫಾರೂಕ್, ರಿಯಾಜ್, ಯಾಸೀನ್ ಮುಲ್ಲಾ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.





