ಆಂಧ್ರ ಪ್ರದೇಶ ಮೂಲದ ನಾಲ್ವರು ವ್ಯಕ್ತಿಗಳು ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಕಂಡುಬಂದಿದ್ದು, 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ ರೂ.1 ಲಕ್ಷ ದಂಡವನ್ನು ವಿಧಿಸಿ ಸಿಂಧನೂರು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಆಂಧ್ರಪ್ರದೇಶದ ತೋಟಾ ರಾಮಕೃಷ್ಣಂ ರಾಜು, ಸದ್ದಲ ಕುಮಾರ ರಾಜ, ಆರ್ಧಾಣಿ ಲಕ್ಷ್ಮಣ ಹಾಗೂ ಸುಜಾತ ಶಿಕ್ಷೆಗೊಳಗಾದ ಅಪರಾಧಿಗಳು.
ಘಟನೆಯ ವಿವರ : 2022ರ ನವೆಂಬರ್ 8ರಂದು ಬೆಳಗಿನ ಜಾವ ಆರೋಪಿತರು ಗಾಂಧಿ ನಗರದಲ್ಲಿರುವ ಭಾಸ್ಕರರವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದರು. ಕಬ್ಬಿಣದ ರಾಡಿನಿಂದ ಬಾಗಿಲು ಒಡೆದು ಒಳನುಗ್ಗಿದ ಆರೋಪಿತರು ಮನೆಯಲ್ಲಿ ಮಲಗಿದ್ದ ಕೃಷ್ಣ ಸಾಯಿ ಮತ್ತು ಧನಲಕ್ಷ್ಮಿ ಇವರನ್ನು ಬೆದರಿಸಿ ಕೀ ಪಡೆದು, ಅಲ್ಮಾರಿಯಿಂದ 218 ಗ್ರಾಂ ಬಂಗಾರ ಕದ್ದೊಯ್ದಿದ್ದರು.
ಇದಲ್ಲದೆ, ಸಾಕ್ಷಿದಾರರನ್ನು ಟವಲ್ನಿಂದ ಕೈಕಟ್ಟಿ ಮತ್ತೊಬ್ಬ ಮಹಿಳೆ ಚಂದ್ರಕಲಾ ಅವರನ್ನು ಹೆದರಿಸಿ, ಮನೆ ಮಾಲೀಕರಾದ ಭಾಸ್ಕರರವರ ಮೇಲೆ ಹಲ್ಲೆ ನಡೆಸಿದ್ದರು. ಶಬ್ದ ಕೇಳಿ ನೆರೆಯವರು ಬಂದುಬಿಟ್ಟುದರಿಂದ ಆರೋಪಿ ಬಳಗ ದರೋಡೆ ಮಾಡಿದ ಆಭರಣಗಳೊಂದಿಗೆ ಪರಾರಿಯಾಗಿತ್ತು.
ತುರುವಿಹಾಳ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು, ಅಂದಿನ ತನಿಖಾಧಿಕಾರಿಗಳಾದ ಚಂದ್ರಪ್ಪ ಪಿ.ಎಸ್.ಐ ಹಾಗೂ ರವಿಕುಮಾರ ಸಿ.ಪಿ.ಐ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಶ್ರೀ ಬಿ.ಬಿ. ಜಕಾತಿ, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು (ಸಿಂಧನೂರು ಪೀಠಾಸೀನ), ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗಳು ಅಪರಾಧ ಎಸಗಿದ್ದಾರೆಂದು ಪರಿಗಣಿಸಿ ಶಿಕ್ಷೆ ವಿಧಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈಲಿನಿಂದ ಇಳಿಯುವಾಗ ಬಿದ್ದು : ಕಾರ್ಮಿಕ ಸಾವು
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಆರ್.ಎ. ಗಡಕರಿ ಸಾಕ್ಷಿ ವಿಚಾರಣೆ ನಡೆಸಿದ್ದು, ಮಂಜುನಾಥ್ ಬೇರಿ ವಾದ ಮಂಡಿಸಿದರು.





