ಶಿರಸಿ: ಪರೀಕ್ಷೆಯ ಸಮಯದಲ್ಲಿ ಮೊಬೈಲ್ ವ್ಯಾಮೋಹ ಬಿಟ್ಟು ಓದಿನ ಕಡೆ ಗಮನಹರಿಸುವಂತೆ ಪೋಷಕರು ನೀಡಿದ ಸಲಹೆಯಿಂದ ಮನನೊಂದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ನಗರದ ಗಣೇಶನಗರದಲ್ಲಿ ಸಂಭವಿಸಿದೆ.
ಘಟನೆಯ ವಿವರ: ನಗರದ ಪ್ರತಿಷ್ಠಿತ ಮಾರಿಕಾಂಬಾ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಶುಭಂ ನಾಗೇಶ ನಾಯ್ಕ್ ಮೃತಪಟ್ಟ ದುರ್ದೈವಿ. ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಬಾಲಕ ಓದಿನತ್ತ ಗಮನಹರಿಸದೆ, ಮೊಬೈಲ್ ಮತ್ತು ಟಿವಿ ವೀಕ್ಷಣೆಯಲ್ಲಿ ಅತಿಯಾಗಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಗುರುವಾರ ಶುಭಂ ಓದುವುದನ್ನು ಬಿಟ್ಟು ಮೊಬೈಲ್ ಬಳಸುತ್ತಿರುವುದನ್ನು ಗಮನಿಸಿದ ತಾಯಿ, ಮಗನ ಹಿತದೃಷ್ಟಿಯಿಂದ ಬುದ್ಧಿವಾದ ಹೇಳಿದ್ದರು. “ಪರೀಕ್ಷೆಗಳು ಹತ್ತಿರ ಬರುತ್ತಿವೆ, ಮೊಬೈಲ್ ಬದಿಗಿಟ್ಟು ಓದಿನತ್ತ ಗಮನಹರಿಸು” ಎಂದು ತಿಳಿಹೇಳಿದ್ದರು.
ಈ ವೇಳೆ ತಾಯಿ-ಮಗನ ನಡುವೆ ಮಾತಿನ ಚಕಮಕಿ ನಡೆದಿದ್ದು, ತಾಯಿ ಮಗನಿಗೆ ಗದರಿಸಿ ಎರಡು ಏಟು ಹೊಡೆದಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ಬಾಲಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣವೇ ಆತನನ್ನು ನಗರದ ಟಿ.ಎಸ್.ಎಸ್. (TSS) ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಮಗನ ಅಕಾಲಿಕ ಮರಣದಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಎಸ್.ಎಸ್.ಎಲ್.ಸಿ ಪರೀಕ್ಷೆ: ಶೇ. 100ರಷ್ಟು ಹಾಜರಾತಿ ಮತ್ತು ಫಲಿತಾಂಶಕ್ಕೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ
ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಒಂದು ವಿನಂತಿ: ಪರೀಕ್ಷೆಯ ಸಮಯ ಎನ್ನುವುದು ಕೇವಲ ಅಂಕಗಳಿಕೆಯ ಹಂತವಲ್ಲ, ಅದು ನಿಮ್ಮ ತಾಳ್ಮೆ ಮತ್ತು ಶಿಸ್ತಿನ ಪರೀಕ್ಷೆಯೂ ಹೌದು. ಪೋಷಕರು ಹೇಳುವ ಮಾತುಗಳು ನಿಮ್ಮ ಭವಿಷ್ಯದ ಏಳಿಗೆಗಾಗಿಯೇ ಹೊರತು ನಿಮ್ಮನ್ನು ನೋಯಿಸುವುದಕ್ಕಲ್ಲ. ಸಣ್ಣಪುಟ್ಟ ವಿಚಾರಗಳಿಗೆ ಬೇಸತ್ತು ಅಮೂಲ್ಯವಾದ ಜೀವನವನ್ನು ಅಂತ್ಯಗೊಳಿಸಿಕೊಳ್ಳುವುದು ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಸೋಲು-ಗೆಲುವು ಏನೇ ಇರಲಿ, ಧೈರ್ಯದಿಂದ ಎದುರಿಸಿ.
ಪೋಷಕರಲ್ಲಿ ವಿನಂತಿ: ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರದೆ, ಅವರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರೀತಿಯಿಂದ ಸಂವಹನ ನಡೆಸಿ. ಮಕ್ಕಳ ಮೊಬೈಲ್ ಚಟದ ಬಗ್ಗೆ ಮೃದುವಾಗಿ ಅವರಿಗೆ ಮನವರಿಕೆ ಮಾಡಿಕೊಡಿ.





