ಶಿರಸಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪ್ರಸ್ತಾವಿತ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದ ಮಹತ್ವದ ಬೆಳವಣಿಗೆಯಾಗಿದೆ.
ವಿಶ್ವ ಪರಂಪರೆಯ ಸಮಾವೇಶದ ನಿಬಂಧನೆ ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಯುನೆಸ್ಕೋ (UNESCO) ಭಾರತ ಸರ್ಕಾರಕ್ಕೆ ಲಿಖಿತ ಸೂಚನೆ ನೀಡಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಕೇಂದ್ರ ನೀರಾವರಿ ಅಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಂಡಿರುವ ಈ ಯೋಜನೆಯ ವಿರುದ್ಧ ಪರಿಸರ ಹೋರಾಟಗಾರರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ಫೆಬ್ರವರಿ 17 ರಂದು ಯುನೆಸ್ಕೋದ ವಿಶ್ವ ಪರಂಪರೆ ಕೇಂದ್ರಕ್ಕೆ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸ್ಪಂದಿಸಿರುವ ಕೇಂದ್ರದ ಕಾರ್ಯದರ್ಶಿಗಳು,

ಮಾರ್ಚ್ 16 ರಂದು ಈ ಪ್ರತ್ಯುತ್ತರ ನೀಡಿದ್ದಾರೆ. ಅಘನಾಶಿನಿ ನದಿ ಜೋಡಣೆ ಯೋಜನೆಯಿಂದ ಪಶ್ಚಿಮ ಘಟ್ಟದ ನೈಸರ್ಗಿಕ ಮತ್ತು ಭೌಗೋಳಿಕ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ಬೃಹತ್ ಜನಾಂದೋಲನ ರೂಪಿಸಲಾಗಿತ್ತು.
ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಿದ್ದವು. ಪಶ್ಚಿಮ ಘಟ್ಟವು ವಿಶ್ವ ಪರಂಪರೆಯ ತಾಣವಾಗಿರುವುದರಿಂದ, ಇಲ್ಲಿನ ಪರಿಸರ ಮೌಲ್ಯಗಳನ್ನು ರಕ್ಷಿಸಬೇಕೆಂದು ಯುನೆಸ್ಕೋಗೆ ಕಾನೂನಾತ್ಮಕ ಅಂಶಗಳೊಂದಿಗೆ ಮನವಿ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಶಿರಸಿ | ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮನ ಜೀವ ಉಳಿಸಿದ ಪಯಾಜ್ (ಪಯ್ಯು) ಚೌಟಿ
ಯುನೆಸ್ಕೋ ನಿಲುವು ಮತ್ತು ಬೆಂಬಲ: ಪಶ್ಚಿಮ ಘಟ್ಟಗಳ ರಕ್ಷಣೆ ಮತ್ತು ಸಂರಕ್ಷಣೆಯ ವಿಷಯದಲ್ಲಿ ಯುನೆಸ್ಕೋ ಎಲ್ಲಾ ಹಂತಗಳಲ್ಲೂ ಬೆಂಬಲ ನೀಡಲು ಬದ್ಧವಾಗಿದೆ ಎಂದು ತನ್ನ ಪತ್ರದಲ್ಲಿ ತಿಳಿಸಿದೆ. ಅಲ್ಲದೆ, ತಾಂತ್ರಿಕ ಹಾಗೂ ಪರಿಸರ ವಿರೋಧಿ ಯೋಜನೆಗಳ ಕುರಿತು ರಾಷ್ಟ್ರೀಯ ಪ್ರಾಧಿಕಾರಗಳ ಗಮನ ಸೆಳೆಯಲು ಸೂಚಿಸಿದೆ.
1972ರ ವಿಶ್ವ ಪರಂಪರೆಯ ಸಮಾವೇಶದ ಶಿಫಾರಸಿನಂತೆ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಆಸ್ತಿಗಳನ್ನು ರಕ್ಷಿಸುವ ಪ್ರಾಥಮಿಕ ಜವಾಬ್ದಾರಿ ಆಯಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲಿದೆ ಎಂಬುದನ್ನು ಯುನೆಸ್ಕೋ ನೆನಪಿಸಿದೆ.
ಪಶ್ಚಿಮ ಘಟ್ಟವನ್ನು “ವಿಶ್ವ ಪರಂಪರೆಯ ಆಸ್ತಿ” ಎಂದು ಉಲ್ಲೇಖಿಸಿರುವ ಯುನೆಸ್ಕೋ, ಈ ಭಾಗದ ಪರಿಸರ ರಕ್ಷಣೆಗಾಗಿ ಹೋರಾಟಗಾರರು ತೋರುತ್ತಿರುವ ಆಸಕ್ತಿ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದೆ. ಈ ಬೆಳವಣಿಗೆಯು ನದಿ ಜೋಡಣೆ ವಿರೋಧಿ ಹೋರಾಟಕ್ಕೆ ಹೊಸ ಆಯಾಮ ಮತ್ತು ಹೆಚ್ಚಿನ ಬಲ ನೀಡಿದಂತಾಗಿದೆ.





