ಶಿರಸಿ: ರಾಜಕೀಯ ದ್ವೇಷ ಹಾಗೂ ಹಳೇ ವೈಮನಸ್ಸಿನ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಸದಸ್ಯ ಮಹಮ್ಮದ ಅನೀಸ್ ತಹಶೀಲ್ದಾರ ಅವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಹಾಗೂ ಈ ವೇಳೆ ನಡೆದ ಅಸ್ಲಂ ಸೈಯ್ಯದ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿಯ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಪ್ರಕರಣದ ಆರು ಮಂದಿ ಆರೋಪಿಗಳಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ.
ಪ್ರಕರಣದ ಹಿನ್ನೆಲೆ: 2019ರ ಏಪ್ರಿಲ್ 23ರಂದು ಲೋಕಸಭಾ ಚುನಾವಣೆ ಮುಗಿದ ರಾತ್ರಿ ಈ ಘಟನೆ ನಡೆದಿತ್ತು. ಅಂದು ರಾತ್ರಿ ಸುಮಾರು 10:30 ಗಂಟೆಗೆ ಕಸ್ತೂರಬಾ ನಗರದ ಕ್ರಾಸ್ ಬಳಿ ಮಹಮ್ಮದ ಅನೀಸ್ ತಹಶೀಲ್ದಾರ ಅವರು ತಮ್ಮ ಬೈಕ್ ಮೇಲೆ ಕುಳಿತು ಮೊಬೈಲ್ ನೋಡುತ್ತಾ ಗೆಳೆಯನಿಗಾಗಿ ಕಾಯುತ್ತಿದ್ದರು.
ಈ ವೇಳೆ ಪೂರ್ವಯೋಜಿತ ಸಂಚಿನಂತೆ ಕಪ್ಪು ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳು, ಹೆಡ್ಲೈಟ್ ಆರಿಸಿ ಬೈಕ್ಗೆ ಡಿಕ್ಕಿ ಹೊಡೆದಿದ್ದರು. ಅನೀಸ್ ಕೆಳಗೆ ಬೀಳುತ್ತಿದ್ದಂತೆ ಚಾಕು, ರಾಡು ಹಾಗೂ ಪೈಪ್ಗಳಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿದ್ದರು.
ಈ ಭೀಕರ ಹಲ್ಲೆಯ ಸಮಯದಲ್ಲಿ ಆರೋಪಿಗಳು ನಡೆಸಿದ ಚಾಕು ಇರಿತದಿಂದ ಅವರದ್ದೇ ಗುಂಪಿನಲ್ಲಿದ್ದ ಅಸ್ಲಂ ಸೈಯ್ಯದ ಎಂಬಾತನಿಗೂ ಗಂಭೀರ ಗಾಯವಾಗಿ ಮೃತಪಟ್ಟಿದ್ದನು. ಕೃತ್ಯದ ನಂತರ ಆರೋಪಿಗಳು ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಗಳನ್ನು ಸುಟ್ಟು ಹಾಕಿ, ಮೊಬೈಲ್ಗಳನ್ನು ಅಘನಾಶಿನಿ ನದಿಗೆ ಎಸೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಸುದೀರ್ಘ ವಿಚಾರಣೆ ನಡೆಸಿ ತೀರ್ಪುನ್ನು ಪ್ರಕಟಿಸಿದ್ದಾರೆ.

ಮಹಮ್ಮದ ಫಾರೂಕ್ ಪಟೇಲ್, ಮಹಮ್ಮದ ಸಲೀಂ ಅಲಿಯಾಸ್ ಸಾಗರ ಭಾಷಾ, ಸರ್ಫರಾಜ್ ಪಟೇಲ್, ಮಹಮ್ಮದ ಆರೀಪ್, ನಿಸ್ಸಾರ ಅಹ್ಮದ ಶೇಖ್ ಹಾಗೂ ಮೌಸಿನ್ ಅಬ್ದುಲ್ ಶುಕೂರ ಹೊನ್ನಾವರ ಎಂಬುವವರಿಗೆ 10 ವರ್ಷ ಶಿಕ್ಷೆ ಹಾಗೂ ತಲಾ 18 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಗಾಯಾಳು ಅನೀಸ್ ಅವರಿಗೆ ಪ್ರತಿಯೊಬ್ಬ ಆರೋಪಿಯಿಂದ 10 ಸಾವಿರದಂತೆ ಒಟ್ಟು 60 ಸಾವಿರ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ.
ಅಸ್ಲಂ ಸೈಯ್ಯದ ಕೊಲೆ ಪ್ರಕರಣ: ಇದೇ ಕೃತ್ಯದಲ್ಲಿ ಅಸ್ಲಂ ಸೈಯ್ಯದ ಎಂಬಾತನ ಸಾವಿಗೆ ಕಾರಣನಾದ ಮಹಮ್ಮದ ಫಾರೂಕ್ ಪಟೇಲ್ಗೆ ಪ್ರತ್ಯೇಕವಾಗಿ 10 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಮೃತನ ಅವಲಂಬಿತ ತಾಯಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜನಸಾಗರದ ಮಧ್ಯೆ ವೈಭವದಿಂದ ಜರುಗಿದ ಶ್ರೀ ಮಾರಿಕಾಂಬಾ ದೇವಿಯ ರಥೋತ್ಸವ
ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಟಿಪ್ಪು ನಗರದ ನಿವಾಸಿ ಮೌಸಿನ್ ಅಬ್ದುಲ್ ಶುಕೂರ ಹೊನ್ನಾವರ, ಬೆಂಗಳೂರಿನ ಕುಖ್ಯಾತ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ. ಕಸ್ತೂರಬಾ ನಗರದ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಬಿಜಾಪುರದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಅಂದಿನ ತನಿಖಾಧಿಕಾರಿ, ಪೊಲೀಸ್ ಉಪ ನಿರೀಕ್ಷಕ ಶಶಿಕುಮಾರ ಸಿ.ಆರ್. ಅವರು ಪ್ರಕರಣದ ಆಳವಾದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಹೆಡ್ ಕಾನ್ಸ್ಟೇಬಲ್ಗಳಾದ ಬಿ.ಆರ್. ಹನುಮಂತ ಮತ್ತು ರಮೇಶ ಮುಚ್ಚಂಡಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಬಲಿಷ್ಠ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದ್ದು, ಸಂತ್ರಸ್ತರಿಗೆ ನ್ಯಾಯ ಸಿಕ್ಕಂತಾಗಿದೆ.





