ಶಿರಸಿ: ಪ್ರತಿಭಟನೆ ಮಾಡುವುದು ಸಂವಿಧಾನ ನಮಗೆ ನೀಡಿರುವ ಹಕ್ಕು. ಆದರೆ ಪ್ರತಿಭಟನಾಕಾರರು ಹೋದ ಮೇಲೆ ಆ ಜಾಗವನ್ನು ಗೋಮೂತ್ರದಿಂದ ಶುದ್ಧೀಕರಿಸುವುದು ಬಹಿರಂಗವಾಗಿ ಅಸ್ಪಶ್ಯತೆಯನ್ನು ಆಚರಿಸಿದಂತೆ.
ಇಂತಹ ಹೀನ ಮನಸ್ಥಿತಿಯವರು ಮೊದಲು ತಮ್ಮ ಮನಸ್ಸನ್ನು ಶುದ್ಧ ಮಾಡಿಕೊಳ್ಳಲಿ” ಎಂದು ಭೀಮ ಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅರ್ಜುನ್ ಮಿಂಟಿ ಅವರು ಗುಡುಗಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಅವರ ಪ್ರಕರಣದಲ್ಲಿ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಶಿರಸಿಯ ದೀನದಯಾಳ್ ಭವನದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಹೋದ ಬಳಿಕ ಬಿಜೆಪಿ ಕಾರ್ಯಕರ್ತರು ಆ ಜಾಗವನ್ನು ಗೋಮೂತ್ರದಿಂದ ಶುದ್ಧೀಕರಿಸಿದ್ದಾರೆ.
ಈ ವಿಚಾರ ತಡವಾಗಿ ಸಂಘಟನೆಯ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ಭೀಮ ಘರ್ಜನೆ ಸಂಘಟನೆ ಸಿಡಿದೆದ್ದಿದೆ. ಈ ಬಗ್ಗೆ ಮಾತನಾಡಿದ ಅರ್ಜುನ್ ಮಿಂಟಿ ಅವರು, “ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ, ಎಲ್ಲಿ ಅನ್ಯಾಯವಾಗುತ್ತದೆಯೋ ಅಲ್ಲಿ ನಮ್ಮ ಸಂಘಟನೆ ಇರುತ್ತದೆ. ಸಾರ್ವಜನಿಕವಾಗಿ ಗೋಮೂತ್ರ ಪ್ರೋಕ್ಷಣೆ ಮಾಡಿರುವುದು ಅಸ್ಪಶ್ಯತೆಯ ಆಚರಣೆಯಾಗಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಪ್ರತಿಭಟನಾ ಹಕ್ಕನ್ನೇ ಪ್ರಶ್ನಿಸುವ ಇಂತಹ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ ? ಭಟ್ಕಳ | ಕರ್ತವ್ಯ ಲೋಪ ಆರೋಪ: ಗ್ರಾಮೀಣ ಠಾಣೆಯ ಸಿಪಿಐ ಹಾಗೂ ಹೆಡ್ ಕಾನ್ಸ್ಟೇಬಲ್ ಅಮಾನತು!
ಗರ್ಭಿಣಿ ಯುವತಿಯ ಮರ್ಯಾದಾ ಹತ್ಯೆಗೆ ಖಂಡನೆ: ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ನಡೆದ 7 ತಿಂಗಳ ಗರ್ಭಿಣಿ ಮಾನ್ಯ ಪಾಟೀಲ್ ಅವರ ಮರ್ಯಾದಾ ಹತ್ಯೆಯನ್ನು ಸಂಘಟನೆ ತೀವ್ರವಾಗಿ ಖಂಡಿಸಿತು. ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಸ್ವಂತ ಮಗಳನ್ನೇ ಕೊಂದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಗೃಹ ಸಚಿವರಿಗೆ ಶಿರಸಿ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅರ್ಜುನ್ ಮಿಂಟಿ ಜಿಲ್ಲಾ ಅಧ್ಯಕ್ಷರು ,ಅಮಿತ್ ಜೋಗಳೇಕರ್ ಜಿಲ್ಲಾ ಉಪಾದ್ಯಕ್ಶರು ,ಶ್ಯಾಮ್ ದೇಶಭಾಗ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ ) ರಾಜೇಶ್ ಕೆ (ತಾಲೂಕು ಉಪಾಧ್ಯಕ್ಷರು ) ಭಾರ್ಗವ್ ಕಾನಾಡೆ , ಗೌತಮ್ ನೇತ್ರೇಕರ್ , ಹರ್ಷ ಬಿ. ಸಾತ್ವಿಕ್ , ಅಕ್ಷಯ್ ಮಡಗಾವಂಕರ್ , ಸಂಜಯ್ ಮಡಗಾವಂಕರ್ , ಸುನಿಲ್ ಜೋಗಳೇಕರ್ , ಪರಶುರಾಮ್ ಜೆ , ಗುರುರಾಜ್ ಮಿಂಟಿ , ಪ್ರಶಾಂತ್ , ಆದಿತ್ಯ ಮರಾಟಿ .ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.





