ಶಿರಸಿ: ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಸಣ್ಣದೊಂದು ‘ಡಿಜಿಟಲ್ ಕೀ’ ಸಕ್ರಿಯಗೊಳಿಸುವಲ್ಲಿ ಆಗುತ್ತಿರುವ ವಿಳಂಬದಿಂದಾಗಿ, ಇಲ್ಲಿನ ಬನವಾಸಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಕಳೆದ ಎರಡು ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಅತಿದೊಡ್ಡ ಕಾಲೇಜು ಎಂಬ ಹೆಗ್ಗಳಿಕೆಯಿದ್ದರೂ, ಆಡಳಿತಾತ್ಮಕ ಎಡವಟ್ಟಿನಿಂದಾಗಿ ಸಿಬ್ಬಂದಿ ವರ್ಗದವರ ಬದುಕು ಬೀದಿಗೆ ಬಂದಂತಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಸುಮಾರು 2,100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ 21 ಖಾಯಂ ಉಪನ್ಯಾಸಕರು, 50ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹಾಗೂ ಕಚೇರಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ನೂತನ ಪ್ರಾಂಶುಪಾಲರು ಅಧಿಕಾರ ವಹಿಸಿಕೊಂಡ ನಂತರ ವೇತನ ಪಾವತಿಗೆ ಅಗತ್ಯವಿರುವ ಉಪ ಖಜಾನೆಯ ‘ಡಿಜಿಟಲ್ ಕೀ’ ಸಕ್ರಿಯಗೊಳ್ಳದಿರುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗಿದೆ.
ಮೂಲಗಳ ಪ್ರಕಾರ, ಪ್ರಸ್ತುತ ಪ್ರಾಂಶುಪಾಲರು ತಮ್ಮ ಹಿಂದಿನ ಕಾಲೇಜಿನಲ್ಲಿ ಬಳಸುತ್ತಿದ್ದ ಡಿಜಿಟಲ್ ಕೀಯನ್ನು ಕಳೆದುಕೊಂಡಿದ್ದಾರೆ. ನಿಯಮದಂತೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ (FIR) ದಾಖಲಿಸಿ ಹೊಸ ಕೀ ಪಡೆಯಬೇಕಿದೆ. ಆದರೆ ಈ ನಿಟ್ಟಿನಲ್ಲಿ ಪ್ರಾಂಶುಪಾಲರು ತೋರುತ್ತಿರುವ ವಿಳಂಬ ನೀತಿ ಈಗ ಇಡೀ ಕಾಲೇಜಿನ ಸಿಬ್ಬಂದಿಯನ್ನು ಆರ್ಥಿಕ ಸಂಕಷ್ಟದ ಸುಳಿಗೆ ತಳ್ಳಿದೆ. ದಾಖಲೆಗಳಿಗೆ ಸಹಿ ಹಾಕಲು ಸಹ ಪ್ರಾಂಶುಪಾಲರು ಸತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಅತಿಥಿ ಉಪನ್ಯಾಸಕರ ಗೋಳು ಕೇಳುವವರಿಲ್ಲ: ಕಡಿಮೆ ವೇತನಕ್ಕೆ ದುಡಿಯುವ ಅತಿಥಿ ಉಪನ್ಯಾಸಕರಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಸಕಾಲಕ್ಕೆ ಹಣ ಸಿಗದೆ ಮಕ್ಕಳ ವಿದ್ಯಾಭ್ಯಾಸ ಹಾಗೂ ದೈನಂದಿನ ಜೀವನ ನಿರ್ವಹಣೆ ಕಷ್ಟವಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿ (CDC) ನಿಧಿಯ ಮೂಲಕ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲು ಅವಕಾಶವಿದ್ದರೂ, ಪ್ರಾಂಶುಪಾಲರು ಅದಕ್ಕೂ ಆಸಕ್ತಿ ತೋರುತ್ತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ವರದಿಯಾದರೂ ಅಲುಗಾಡದ ಆಡಳಿತ: ಅಧಿಕಾರಿಗಳ ‘ಮೌನ’ಕ್ಕೆ ಕಾರಣವೇನು?
ಶಾಸಕರ ಮಧ್ಯಸ್ಥಿಕೆಗೆ ಆಗ್ರಹ: “ಸರ್ಕಾರ ವೇತನ ಬಿಡುಗಡೆ ಮಾಡಿದರೂ ಪ್ರಾಂಶುಪಾಲರ ದ್ವಂದ್ವ ನೀತಿಯಿಂದ ನಮಗೆ ಹಣ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನಾವು ಬೋಧನೆ ಮುಂದುವರಿಸಿದ್ದೇವೆ, ಆದರೆ ನಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ” ಎಂದು ನೊಂದ ಉಪನ್ಯಾಸಕರು ತಿಳಿಸಿದ್ದಾರೆ.
ಈ ಗಂಭೀರ ವಿಚಾರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಭೀಮಣ್ಣ ನಾಯ್ಕ ಅವರು ಮಧ್ಯಪ್ರವೇಶಿಸಿ, ಕೂಡಲೇ ಈ ತಾಂತ್ರಿಕ ತೊಡಕನ್ನು ನಿವಾರಿಸಿ ವೇತನ ಕೊಡಿಸಬೇಕೆಂದು ಇಡೀ ಕಾಲೇಜು ಕುಟುಂಬ ಒತ್ತಾಯಿಸುತ್ತಿದೆ.





