ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ “ಶ್ರೀ ದುರ್ಗಾ ಜ್ಯುವೇಲರಿ ವರ್ಕ್ಸ್” ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಶಿರಸಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 16/12/2025 ರಂದು ಸಂಜೆ 5:45 ರ ಸುಮಾರಿಗೆ ಬುರ್ಕಾ ಧರಿಸಿದ್ದ ಮೂವರು ಮಹಿಳೆಯರು ನಟರಾಜ ರಸ್ತೆಯಲ್ಲಿರುವ ರಾಜೇಶ್ ಗಣಪತಿ ಶೇಟ್ ಅವರಿಗೆ ಸೇರಿದ ಜ್ಯುವೆಲ್ಲರಿ ಶಾಪ್ಗೆ ಬಂದಿದ್ದರು.
ವಿವಿಧ ವಿನ್ಯಾಸದ ಝುಮಕಿ ಮತ್ತು ಓಲೆಗಳನ್ನು ತೋರಿಸುವಂತೆ ಕೇಳಿ ಮಾಲೀಕರ ಗಮನವನ್ನು ಬೇರೆಡೆ ಸೆಳೆದ ಈ ತಂಡ, ಅವರಿಗೆ ತಿಳಿಯದಂತೆ ಸುಮಾರು 13,38,000/- ರೂಪಾಯಿ ಮೌಲ್ಯದ 103.750 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.
ಈ ಕುರಿತು ಮಾಲೀಕರು ನೀಡಿದ ದೂರಿನನ್ವಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಾಂಭೀರ್ಯವನ್ನು ಅರಿತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ತಾಂತ್ರಿಕ ವಿಭಾಗ ಮತ್ತು ಸ್ಥಳೀಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯ ಫಲವಾಗಿ,
ಈ ಸುದ್ದಿ ಓದಿದ್ದೀರಾ? ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?
ದಿನಾಂಕ 26/12/2025 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಅರ್ಷಿಯಾ @ ಖತೀಜಾ (37), ಸಲ್ಮಾ @ ಅಣ್ಣಿಮ್ಮ (35), ಭಾಷಾಸಾಬ್ (38) ಮತ್ತು ವಿಜಯನಗರ ಜಿಲ್ಲೆ ಹರಪನಳ್ಳಿಯ ಹಮೀದಾಭಿ (60) ಎಂಬುವವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡಿದ್ದು, ಅವರಿಂದ 28.078 ಗ್ರಾಂ ಚಿನ್ನಾಭರಣ ಹಾಗೂ 40 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು 3,84,090/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಶಿರಸಿ ಉಪ-ವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐಗಳಾದ ನಾಗಪ್ಪ ಬಿ., ನಾರಾಯಣ ರಾಥೋಡ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಮತ್ತು ಕಾರವಾರ ಟೆಕ್ನಿಕಲ್ ಸೆಲ್ ತಂಡ ಭಾಗವಹಿಸಿದ್ದರು.





