ಹುಬ್ಬಳ್ಳಿಯಲ್ಲಿ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಾಳೆ ಎಂಬ ಏಕೈಕ ಕಾರಣಕ್ಕೆ, ಸ್ವಂತ ತಂದೆಯೇ ತನ್ನ ಗರ್ಭಿಣಿ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ದಲಿತ ಯುವಕನನ್ನು ಮದುವೆಯಾದ ಮಗಳ ಮೇಲಿನ ಈ ‘ಮರ್ಯಾದಾ ಹತ್ಯೆ’ಯನ್ನು ಭೀಮಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, “ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸಮಾಜದಲ್ಲಿ ಜಾತಿ ಎಂಬ ಪಿಡುಗು ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಈ ಕ್ರೂರ ಘಟನೆಯೇ ಸಾಕ್ಷಿ. ಧರ್ಮದ ಹೆಸರಿನಲ್ಲಿ ಕಾಶ್ಮೀರದಲ್ಲಿ ಅಮಾಯಕರನ್ನು ಕೊಲ್ಲುವ ಉಗ್ರರಿಗೂ ಮತ್ತು ಜಾತಿಯ ಹೆಸರಿನಲ್ಲಿ ಸ್ವಂತ ಮಗಳನ್ನೇ ಕೊಲ್ಲುವವರಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರೂ ದೇಶಕ್ಕೆ ಅಂಟಿದ ಅಪಾಯಕಾರಿ ರೋಗಗ್ರಸ್ತರು. ಹುಟ್ಟಿಸಿದ ಮಾತ್ರಕ್ಕೆ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು
“ಹಿಂದೂಗಳೆಲ್ಲಾ ಒಂದೇ ಎಂದು ಘೋಷಿಸುವ ಸಂಘಟನೆಗಳು ಇಂತಹ ಘೋರ ಅನ್ಯಾಯ ನಡೆದಾಗ ಮೌನಕ್ಕೆ ಶರಣಾಗಿರುವುದು ಖೇದಕರ. ಒಬ್ಬ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಒಬ್ಬ ಗರ್ಭಿಣಿ ಹೆಣ್ಣುಮಗಳ ಹತ್ಯೆಯಾದಾಗ ಯಾವೊಂದು ಸಂಘಟನೆಯೂ ಪ್ರತಿಭಟನೆಗೆ ಮುಂದಾಗದಿರುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ” ಎಂದು ಟೀಕಿಸಿದರು.
ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿರುವ ಭೀಮಘರ್ಜನೆ ಸಂಘಟನೆಯು ತನ್ನ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ: ಮಗಳನ್ನು ಕೊಂದ ಆರೋಪಿ ತಂದೆ ಹಾಗೂ ಈ ಕೃತ್ಯಕ್ಕೆ ಸಹಕರಿಸಿದವರನ್ನು ಕೂಡಲೇ ಬಂಧಿಸಿ, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಕಠಿಣ ಕಾನೂನು ಕ್ರಮ ಜರುಗಿಸಿ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ ? ಯಲ್ಲಾಪುರ | ಪಟ್ಟಣ ಪಂಚಾಯತ ನಲ್ಲಿ ₹35 ಲಕ್ಷ ಅಕ್ರಮ ಆರೋಪ; ನ್ಯಾಯಾಂಗ ತನಿಖೆಗೆ ಕರವೇ (ಗಜಸೇನೆ) ಆಗ್ರಹ
ನೊಂದ ಕುಟುಂಬಕ್ಕೆ ಹಾಗೂ ಮೃತಳ ಪತಿಗೆ ಸರ್ಕಾರ ಕೂಡಲೇ ಒಂದು ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಬೇಕು. ಜಾತಿ ವ್ಯವಸ್ಥೆಯ ವಿರುದ್ಧ ಮತ್ತು ನೊಂದ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಸಂಘಟನೆಯು ಹೋರಾಟ ಮುಂದುವರಿಸಲಿದೆ ಎಂದು ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಹೇಳಿದರು.





