ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ತಂಡ ಯಶಸ್ವಿಯಾಗಿದೆ.
ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಗ್ಯಾಂಗ್ನ ಆರು ಜನರನ್ನು ಬಂಧಿಸಲಾಗಿದ್ದು, ಅವರಿಂದ ಮೂರು ಜಾನುವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಳಗೇರಿ ಗ್ರಾಮದ ನಿವಾಸಿ ರಾಮಚಂದ್ರ ಗೌಡ ಮತ್ತು ಅವರ ಸಹೋದರರ ಹೊಲದಲ್ಲಿದ್ದ ಕೊಟ್ಟಿಗೆಯಿಂದ ನಾಲ್ಕು ಎತ್ತುಗಳು ಹಾಗೂ ಮೂರು ಹೊರಿಗಳನ್ನು ಜನವರಿ 9 ಮತ್ತು 10 ರ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಜನವರಿ 15 ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರ ಮತ್ತು ಅಕ್ಕಿ ಆಲೂರ ಮೂಲದ ಮೋಹನ ಶೇಖಪ್ಪ ಗೊಲ್ಲರ (25), ಬಸವರಾಜ ಅಮ್ಮಣಪ್ಪ ಗೊಲ್ಲರ (39), ಅವಿನಾಶ @ ಅಭೀಲಾಷ ರುದ್ದಪ್ಪ ಗೊಲ್ಲರ (22), ಸುರೇಶ ಫಕೀರಪ್ಪ ಗೊಲ್ಲರ (38), ಬಸವರಾಜ ಫಕೀರಪ್ಪ ಗೊಲ್ಲರ (47) ಮತ್ತು ಅಯೂಬ ಅನೀಮ್ ಸಾಬ (54) ಎಂಬುವವರನ್ನು ದಸ್ತಗಿರಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಆರ್ಸಿಬಿ ಪಾಲಾದ ಗೋಕರ್ಣದ ಕುವರಿ: ಪ್ರತ್ಯೂಷಾ ಕುಮಾರ್ ಡಬ್ಲ್ಯೂಪಿಎಲ್ಗೆ ಆಯ್ಕೆ
ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಬಂಧಿತರಿಂದ ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ ಮಹಿಂದ್ರಾ ಪಿಕ್ ಅಪ್ ವಾಹನ, ಒಂದು ಮೋಟಾರ್ ಸೈಕಲ್ ಮತ್ತು ಮೂರು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ದೀಪನ್ ಎಂ.ಎನ್. ಹಾಗೂ ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಶಿರಸಿ ಗ್ರಾಮೀಣ ಪೊಲೀಸ್ ನಿರೀಕ್ಷಕ ರಮೇಶ್ ಶಂ. ಹೂಗಾರ ನೇತೃತ್ವದ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಈ ತಂಡದಲ್ಲಿ ಪಿ.ಎಸ್.ಐ ಗಳಾದ ಸಂತೋಷಕುಮಾರ ಎಮ್, ಅಶೋಕ ಆರ್ ರಾಠೋಡ, ಎ.ಎಸ್.ಐ ಗಳಾದ ಸಂತೋಷ ಕಮಟಗೇರಿ, ಪ್ರದೀಪ ಟಿ. ರೇವಣಕರ ಸೇರಿದಂತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ವಿಭಾಗದ ಸದಸ್ಯರು ಭಾಗವಹಿಸಿದ್ದರು. ಸಮಯೋಚಿತವಾಗಿ ಕಾರ್ಯನಿರ್ವಹಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಇಡೀ ತಂಡಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.





