ಶಿರಸಿ: ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಕೆ.ಡಿ.ಸಿ.ಸಿ. ಬ್ಯಾಂಕ್) ಆಡಳಿತ ಮಂಡಳಿಯ ಪ್ರತಿಷ್ಠಿತ ಚುನಾವಣೆಯಲ್ಲಿ ಮಾಜಿ ಸಚಿವ ಮತ್ತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ನೇತೃತ್ವದ ಬಣವು ಸಚಿವ ಮಂಕಾಳ ವೈದ್ಯ ಬಣದ ವಿರುದ್ಧ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಅಂತಿಮ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ. ಕಳೆದ ಎರಡು ತಿಂಗಳಿನಿಂದ ತೀವ್ರ ಪೈಪೋಟಿ ಮತ್ತು ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಈ ಚುನಾವಣಾ ಪ್ರಕ್ರಿಯೆಯಲ್ಲಿ ಶನಿವಾರ 13 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.
ಒಟ್ಟು 16 ನಿರ್ದೇಶಕರ ಸ್ಥಾನಗಳಿಗೆ ನಡೆದ ಈ ಸ್ಪರ್ಧೆಯಲ್ಲಿ, ಚುನಾವಣೆಗೂ ಮುನ್ನ ಮಂಕಾಳ ವೈದ್ಯ ಬಣದಿಂದ 2 (ಹೊನ್ನಾವರ-ವಿ.ಕೆ. ವಿಶಾಲ್, ಭಟ್ಕಳ-ಮಂಕಾಳ ವೈದ್ಯ) ಮತ್ತು ಶಿವರಾಮ ಹೆಬ್ಬಾರ್ ಬಣದಿಂದ 1 (ಅಂಕೋಲಾ-ಬೀರಣ್ಣ ಬೊಮ್ಮಯ್ಯ ನಾಯಕ) ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಪ್ರಕಟಗೊಂಡ ಫಲಿತಾಂಶಗಳು: ಕುಮಟಾ: ಶಿವರಾಮ ಹೆಬ್ಬಾರ್ ಬಣದ ರಾಜಗೋಪಾಲ ಅಡಿ 9 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ವಿರುದ್ಧ ಗಜಾನನ ಪೈ 0, ಶ್ರೀಧರ ಭಾಗ್ವತ್ 6 ಮತಗಳನ್ನು ಪಡೆದಿದ್ದಾರೆ. ಹಳಿಯಾಳ: ಹೆಬ್ಬಾರ್ ಬಣದ ಎಸ್.ಎಲ್. ಘೋಟ್ನೇಕರ್ 9 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಸುಭಾಸ್ ಕೊರ್ವೇಕರ್ 4 ಮತ. ಜೋಯಿಡಾ: ಹೆಬ್ಬಾರ್ ಬಣದ ಕೃಷ್ಣ ದೇಸಾಯಿ 5 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಅವರ ವಿರುದ್ಧ ಪುರುಷೋತ್ತಮ ಕಾಮತ್ 4 ಮತಗಳನ್ನು ಪಡೆದಿದ್ದಾರೆ. ಮುಂಡಗೋಡ: ಹೆಬ್ಬಾರ್ ಬಣದ ಎಚ್.ಎಂ. ನಾಯ್ಕ 8 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಎಲ್.ಟಿ. ಪಾಟೀಲ್ 5 ಮತ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪರವಾನಗಿ ಇಲ್ಲದೆ ಮರಳು ಸಂಗ್ರಹ; ಅಧಿಕಾರಿಗಳ ವಿರುದ್ಧ ಜನಾಕ್ರೋಶ
ನ್ಯಾಯಾಲಯದ ವ್ಯಾಪ್ತಿಯಲ್ಲಿ ಫಲಿತಾಂಶ: ಇನ್ನುಳಿದ 9 ಕ್ಷೇತ್ರಗಳ ಮತ ಎಣಿಕೆ ನಡೆದಿದ್ದರೂ, ನ್ಯಾಯಾಲಯದ ನಿರ್ದೇಶನದ ಮೇರೆಗೆ ಅವುಗಳ ಫಲಿತಾಂಶ ಪ್ರಕಟವನ್ನು ತಡೆ ಹಿಡಿಯಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ: ಸಿದ್ದಾಪುರ ಕ್ಷೇತ್ರದ ಫಲಿತಾಂಶವನ್ನು ನ್ಯಾಯಾಲಯದ ಸೂಚನೆಯಂತೆ ಮುಂದೂಡಲಾಗಿದೆ. ಕೋರ್ಟ್ ಆದೇಶದ ಬಳಿಕ ಫಲಿತಾಂಶ ಪ್ರಕಟವಾಗಲಿರುವ ಕ್ಷೇತ್ರಗಳಲ್ಲಿ, ಹೆಬ್ಬಾರ್ ಬಣದ ಬೆಂಬಲಿಗರಾದ ಪ್ರಕಾಶ ಗುನಗಿ (ಕಾರವಾರ), ಶಿವರಾಮ ಹೆಬ್ಬಾರ್ (ಯಲ್ಲಾಪುರ), ಶಿರಸಿ ಟಿಎಂಎಸ್ ರವಿ ಹೆಗಡೆ ಹುಳಗೋಳ (ಮಾರ್ಕೆಟಿಂಗ್) ಮುಂಚೂಣಿಯಲ್ಲಿದ್ದಾರೆ. ಮಂಕಾಳ ವೈದ್ಯ ಬಣದಿಂದ ವಿಶ್ವನಾಥ ಭಟ್ ಕರ್ವ (ಔದ್ಯೋಗಿಕ ಸಹಕಾರ) ಮುನ್ನಡೆ ಕಾಯ್ದುಕೊಂಡಿದ್ದಾರೆ.
ನ್ಯಾಯಾಲಯದ ತೀರ್ಮಾನವು ಪ್ರಕಟಗೊಂಡ ನಂತರವೇ ಅಂತಿಮ ಫಲಿತಾಂಶ ಹೊರಬೀಳಲಿದೆ. ಆದರೆ ಪ್ರಸ್ತುತ ಲಭ್ಯವಿರುವ ಪ್ರಕಟಿತ ಹಾಗೂ ಮುಂಚೂಣಿ ಫಲಿತಾಂಶಗಳ ಪ್ರಕಾರ, ಮಾಜಿ ಸಚಿವ ಶಿವರಾಮ ಹೆಬ್ಬಾರ್ ಅವರ ಬಣವು ಆಡಳಿತ ಮಂಡಳಿಯಲ್ಲಿ ಬಹುಮತ ಸಾಧಿಸಿ, ಬ್ಯಾಂಕಿನ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.





