ಶಿರಸಿ: ಉತ್ತರ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದ ನಾಮಪತ್ರಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು 46 ಅಭ್ಯರ್ಥಿಗಳು ಸಲ್ಲಿಸಿದ್ದ 87 ನಾಮಪತ್ರಗಳಲ್ಲಿ 44 ನಾಮಪತ್ರಗಳು ಅಂಗೀಕಾರಗೊಂಡಿದ್ದು, ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 19 ಕೊನೆಯ ದಿನವಾಗಿತ್ತು.
ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಕೆ.ವಿ.ಕಾವ್ಯಾರಾಣಿ ಅವರು ಈ ಕೆಳಗಿನ ಎರಡು ನಾಮಪತ್ರಗಳನ್ನು ತಿರಸ್ಕರಿಸಿದ್ದಾರೆ: ಮಾದೇವ ಗೋವಿಂದ ನಾಯ್ಕ (ಭಟ್ಕಳ): ಇವರ ನಾಮಪತ್ರ ತಿರಸ್ಕೃತಗೊಂಡ ಕಾರಣ, ಭಟ್ಕಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕಣದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಸೂಚಕರು ಮತದಾರರಾಗಿಲ್ಲದ ಕಾರಣ ಮಾದೇವ ಗೋವಿಂದ ನಾಯ್ಕ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ವಿವೇಕ ಹೆಗಡೆ ಗಡಿಹಿತ್ಲು (ಸಿದ್ದಾಪುರ): ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಪಿಟಿಶನ್ ಆದೇಶದ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ವಿವೇಕ ಹೆಗಡೆ ಗಡಿಹಿತ್ಲು ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ.
ಪ್ರಮುಖ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ: ಶಾಸಕ ಸತೀಶ ಸೈಲ್ (ಕಾರವಾರ), ಶಾಸಕ ಶಿವರಾಮ ಹೆಬ್ಬಾರ (ಯಲ್ಲಾಪುರ), ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (ಭಟ್ಕಳ) ಅವರ ನಾಮಪತ್ರಗಳು ಅಂಗೀಕಾರಗೊಂಡಿವೆ.
ಈ ಸುದ್ದಿ ಓದಿದ್ದೀರಾ? ಕುಮಟಾ | ‘ಅಂದರ್-ಬಾಹರ್’ ಆಟಕ್ಕೆ ಅನುಮತಿ ನೀಡುವಂತೆ ಬೇಡಿಕೆ; ನೀಡದಿದ್ದರೆ ಹೋರಾಟದ ಎಚ್ಚರಿಕೆ!
ಇತರ ಪ್ರಮುಖರು: ಕಾರವಾರದಿಂದ ನಂದಕಿಶೋರ ನಾಯ್ಕ, ಸುರೇಶ ರಾಮ ಪೆಡೇಕರ, ಶಿರಸಿಯಿಂದ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಗಣಪತಿ ಜೋಶಿ ಕೊಪ್ಪಲತೋಟ, ಸಿದ್ದಾಪುರದಿಂದ ಬಾಲಚಂದ್ರ ಹೆಗಡೆ ಹಳದೋಟ, ರಾಘವೇಂದ್ರ ಶಾಸ್ತ್ರಿ, ಯಲ್ಲಾಪುರದಿಂದ ರಾಮಕೃಷ್ಣ ಹೆಗಡೆ ಗೋರ್ಸಗದ್ದೆ, ಮುಂಡಗೋಡದಿಂದ ಎಲ್.ಟಿ.ಪಾಟೀಲ್, ಹಳಿಯಾಳದಿಂದ ಎಸ್.ಎಲ್.ಘೋಟೆಕರ, ಅಂಕೋಲಾದಿಂದ ಬೀರಣ್ಣ ನಾಯಕ, ಕುಮಟಾದಿಂದ ಗಜಾನನ ಪೈ, ರಾಜಗೋಪಾಲ ಅಡಿ, ಹೊನ್ನಾವರದಿಂದ ಶಿವಾನಂದ ಹೆಗಡೆ ಕಡತೋಕ, ಜೊಯ್ದಾದಿಂದ ಕೃಷ್ಣ ದೇಸಾಯಿ, ಹಾಗೂ ಒಕ್ಕಲುತನ, ಗ್ರಾಹಕರ, ಅರ್ಬನ್ ಬ್ಯಾಂಕ್ ಸೇರಿದಂತೆ ಇತರೆ ಕ್ಷೇತ್ರಗಳಿಂದ ಗೋಪಾಲಕೃಷ್ಣ ವೈದ್ಯ, ಆರ್.ಎಂ.ಹೆಗಡೆ ಬಾಳೇಸರ, ತಿಮ್ಮಯ್ಯ ಹೆಗಡೆ ಉಲ್ಲಾಳ, ಮೋಹನದಾಸ ನಾಯಕ ಮುಂತಾದವರ ನಾಮಪತ್ರಗಳು ಸ್ವೀಕೃತಗೊಂಡಿವೆ.





