ಶಿರಸಿಯ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ–ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಕೆಡಿಸಿಸಿ) ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ, ಮತಗಟ್ಟೆ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ ಉತ್ತರ ಕನ್ನಡ ಡಿಸಿ ಕೆ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಅಕ್ಟೋಬರ್ 25ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಶಿರಸಿಯ ನ್ಯೂ ಮಾರ್ಕೆಟ್ ಯಾರ್ಡ್ನ ಮತಗಟ್ಟೆ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ.
ಆದೇಶದ ಪ್ರಕಾರ, ಜಿಲ್ಲೆಯಲ್ಲಿ ಐದು ಜನಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಮೆರವಣಿಗೆ, ಸಭೆ, ಸಮಾರಂಭ ನಡೆಸುವುದು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರಗಳು– ಖಡ್ಗಗಳು, ಬಂದೂಕುಗಳು, ಚಾಕು, ಲಾಠಿ, ದೊಣ್ಣೆ, ಬರ್ಚಿ, ಗದೆಗಳು ಅಥವಾ ಯಾವುದೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುವುದು ನಿಷಿದ್ಧ. ಮತಗಟ್ಟೆಗಳಿಂದ 100 ಮೀಟರ್ ವ್ಯಾಪ್ತಿಯೊಳಗೆ ಚುನಾವಣಾ ಪ್ರಚಾರ ಸಂಪೂರ್ಣ ನಿಷೇಧಿಸಲಾಗಿದೆ. ಚಿತ್ರ, ದೂರದರ್ಶನ ಅಥವಾ ಇತರ ಸಾಧನಗಳ ಮೂಲಕ ಚುನಾವಣೆ ಪ್ರಚಾರ ಮಾಡುವಂತಿಲ್ಲ. ಈ ಪ್ರದೇಶದ ವ್ಯಾಪ್ತಿಯೊಳಗಿನ ಝೆರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಸೈಬರ್ ಕೆಫೆ ಮುಂತಾದವುಗಳಿಗೂ ನಿರ್ಬಂಧ ವಿಧಿಸಲಾಗಿದೆ. ಕಲ್ಲು, ಕ್ಷಾರ ಪದಾರ್ಥ, ಸ್ಫೋಟಕ ವಸ್ತುಗಳು ಅಥವಾ ಹಾನಿಕಾರಕ ವಸ್ತುಗಳನ್ನು ಸ್ಥಳಕ್ಕೆ ಕೊಂಡೊಯ್ಯುವುದೂ ಶೇಖರಿಸುವುದೂ ನಿಷಿದ್ಧ. ಅದೇ ರೀತಿ, ಮನುಷ್ಯ ಶವದ ಆಕೃತಿಯ ಪ್ರದರ್ಶನ ಅಥವಾ ದಹನ ಮಾಡುವುದು, ಘೋಷಣೆ ಕೂಗುವುದು, ಪದಹಾಡುವುದು, ವಾದ್ಯಬಾರಿಸುವುದು, ವ್ಯಾಖ್ಯಾನ ನೀಡುವುದು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಕ್ರಿಯೆಗಳು ಸಂಪೂರ್ಣ ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳ ಸೂಚನೆ.
ಉದ್ರೇಕಕಾರಿ ಹಾಡುಗಳು, ಪ್ರಚೋದನಾತ್ಮಕ ಕೂಗಾಟಗಳು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು ಅಥವಾ ಚಿಹ್ನೆಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ. ಯಾವುದೇ ವ್ಯಕ್ತಿ ಮಾರಕಾಸ್ತ್ರಗಳು, ಸ್ಪೋಟಕ ಅಥವಾ ವಿನಾಶಕಾರಿ ವಸ್ತುಗಳೊಂದಿಗೆ ಕಾಣಿಸಿಕೊಂಡರೆ, ಅವುಗಳನ್ನು ಪೊಲೀಸರು ವಶಪಡಿಸಿಕೊಳ್ಳಲಿದ್ದಾರೆ ಜೊತೆಗೆ ಅಂತವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ. ಮತಗಟ್ಟೆ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್, ಕಾರ್ಡಲೆಸ್ ಫೋನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನೂ ನಿಷೇಧಿಸಲಾಗಿದೆ (ಚುನಾವಣಾ ಸಿಬ್ಬಂದಿ ಹೊರತುಪಡಿಸಿ). ಮತಗಟ್ಟೆ ವ್ಯಾಪ್ತಿಯೊಳಗೆ ಪ್ರಚಾರದ ಪೋಸ್ಟರ್, ಬ್ಯಾನರ್ ಮತ್ತು ಇತರ ವಸ್ತುಗಳನ್ನು ಬಳಸುವಂತಿಲ್ಲ. ಧ್ವನಿವರ್ಧಕಗಳ ಬಳಕೆ ನಿಷಿದ್ಧವಾಗಿದೆ. ಹಾಗೆಯೇ, ಕಲ್ಯಾಣ ಮಂಟಪ, ಸಮುದಾಯ ಭವನ, ಹೋಟೆಲ್ ಮತ್ತು ಅತಿಥಿಗೃಹಗಳಲ್ಲಿ ವಾಸ್ತವ್ಯ ಹೂಡಿದವರ ಪಟ್ಟಿಗಳನ್ನು ಪರಿಶೀಲಿಸಿ ಮತದಾರರಲ್ಲದವರನ್ನು ಕ್ಷೇತ್ರದಿಂದ ಹೊರಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದರೆ ಈ ಆದೇಶವು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಮತದಾನಕ್ಕಾಗಿ ಮತಗಟ್ಟೆಗೆ ಬರುವ ಮತದಾರರಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





