ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಲಿಲ್ಲವಾ? ನಾಡದೇವಿ ಪೂಜೆಗೆ ಜಾತಿ, ಧರ್ಮ ಬೇಡ. ಅಬ್ದುಲ್ ಕಲಾಂ ರಾಷ್ಟ್ರಪತಿ ಆದಾಗ ನಾವು ಹೆಮ್ಮೆ ಪಟ್ಟಿದ್ದೇವೆ. ಹಾಗಿದ್ದರೆ ಈಗ ಕನ್ನಡಕ್ಕೆ ಬೂಕರ್ ಪ್ರಶಸ್ತಿ ಪಡೆದು ರಾಜ್ಯಕ್ಕೆ ಗೌರವ ತಂದ ಬಾನು ಮುಷ್ತಾಕ್ ಅವರ ಬಗ್ಗೆ ಅಪಚಾರ ಏಕೆ? ಎಂದು ಪ್ರಶ್ನಿಸಿದ ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಮ ಹೆಬ್ಬಾರ ಅವರು ಧರ್ಮ ಯಾವ ಪಕ್ಷದ ಗುತ್ತಿಗೆಯಲ್ಲ ಎಂದು ಬಿಜೆಪಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಶಿರಸಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿ ನೀಡಿದ ಅವರು, “ನಾನೀಗ ಫ್ರೀ ಬರ್ಡ್. ಒಳ್ಳೆಯ ಕೆಲಸಕ್ಕೆ ಯಾವತ್ತೂ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಾಯಕತ್ವದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ” ಎಂದು ಪ್ರಶಂಸಿಸಿದ ಅವರು, ಬಾನು ಮುಷ್ತಾಕ್ ನಾಡದೇವಿ ಉತ್ಸವ ಉದ್ಘಾಟನೆಗೆ ವಿರೋಧ ವ್ಯಕ್ತವಾಗಿರುವುದನ್ನು ಟೀಕಿಸಿದರು.
ಕೆಡಿಸಿಸಿ ಬ್ಯಾಂಕ್ ಬಗ್ಗೆ ಮಾತನಾಡಿ, “ಇದು ಜಿಲ್ಲೆಯ ರೈತರ ಮಾತೃ ಸಂಸ್ಥೆ. 1.12 ಲಕ್ಷ ರೈತರಿಗೆ ₹1700 ಕೋಟಿ ಸಾಲ ನೀಡಿರುವ ಕಾಮಧೇನು. ನಾವು ಶಾಶ್ವತವಲ್ಲ. ಆದರೆ, ಇಂತಹ ಸಂಸ್ಥೆಗಳ ಶಾಶ್ವತತೆಗೆ ನಾವು ಶ್ರಮಿಸಬೇಕು,” ಎಂದರು.
ಧರ್ಮಸ್ಥಳ ಪ್ರಕರಣ ಕುರಿತು ಪ್ರತಿಕ್ರಿಯಿಸುತ್ತಾ, “ಇದುವರೆಗೆ ಕೇವಲ ಶೇಕಡಾ 30ರಷ್ಟೇ ಸತ್ಯಾಂಶ ಬಹಿರಂಗವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯ ಹೊರಬರುತ್ತದೆ” ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಶಿರಸಿ | 35 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಕೊನೆಗೂ ಬಂಧನ





