ಶಿರಸಿ: ನಗರದ ಮಧ್ಯಭಾಗದ ಪ್ರಮುಖ ರಸ್ತೆಯಲ್ಲಿದ್ದ ಬೃಹತ್ ಹೊಂಡವೊಂದನ್ನು ನಗರಸಭೆ ಸದಸ್ಯರು ಸ್ವತಃ ತಮ್ಮ ಖರ್ಚಿನಲ್ಲಿ ಸಾಮಗ್ರಿ ತರಿಸಿ, ತಾವೇ ಕಾಂಕ್ರೀಟ್ ಕಲಸಿ ಮುಚ್ಚುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ. ನಗರಸಭೆಯ ಸದಸ್ಯರಾದ ನಾಗರಾಜ್ ನಾಯ್ಕ್ (ಜಿಮ್ ನಾಗ) ಅವರು ಈ ಕಾರ್ಯವನ್ನು ಸ್ವಯಂ ಪ್ರೇರಣೆಯಿಂದ ಕೈಗೊಂಡಿದ್ದಾರೆ. ಶಿರಸಿಯ ಐದು ರಸ್ತೆ ಸರ್ಕಲ್ ಬಳಿಯ ರಸ್ತೆ ಭಾಗದಲ್ಲಿ ಬಿದ್ದಿದ್ದ “ಯಮಸ್ವರೂಪದ” ಹೊಂಡದಿಂದಾಗಿ ವಾಹನ ಸವಾರರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದರು.
ಈ ವಿಷಯವನ್ನು ಗಮನಿಸಿದ ಸದಸ್ಯ ನಾಗರಾಜ್ ನಾಯ್ಕ್ ಅವರು ಇಂದು ಬೆಳಗ್ಗೆ ತಮ್ಮ ಸಂಗಡಿಗರೊಂದಿಗೆ ಸ್ಥಳಕ್ಕೆ ಬಂದು, ಸ್ವಂತ ಹಣದಲ್ಲಿ ಸಿಮೆಂಟ್ ಮತ್ತು ಜಲ್ಲಿಯನ್ನು ತರಿಸಿ, ತಾವೇ ಸ್ವತಃ ಕಾಂಕ್ರೀಟ್ ಕಲಸಿ ಹೊಂಡವನ್ನು ಸಂಪೂರ್ಣವಾಗಿ ಮುಚ್ಚಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿದ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇವರು ಮಾಡಿದ ಕೆಲಸಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸಣ್ಣವರ ಬಂಧನ, ದೊಡ್ಡವರಿಗೆ ರಕ್ಷಣೆ: ಮಟ್ಕಾ, ಇಸ್ಪಿಟ್ ದಂಧೆಯ ಹಿಂದಿರುವ ಕಾಣದ ಕೈ ಯಾವುದು?
ಇಲಾಖೆ ಎಚ್ಚೆತ್ತುಕೊಳ್ಳಲಿ ಎಂಬ ಆಗ್ರಹ : ಸದಸ್ಯರ ಈ ಜನಪರ ಕಾರ್ಯಕ್ಕೆ ಸಾಮಾಜಿಕ ವಲಯದಲ್ಲೂ ಶ್ಲಾಘನೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ನಗರದಾದ್ಯಂತ ಬಿದ್ದಿರುವ ನೂರಾರು ಹೊಂಡಗಳ ಕುರಿತು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
“ನಗರದ ಅನೇಕ ರಸ್ತೆಗಳಲ್ಲಿ ಗುಂಡಿಗಳು ತುಂಬಿಕೊಂಡಿವೆ. ಈಗ ಮಳೆ ಪ್ರಮಾಣ ಕಡಿಮೆಯಾದ ಕಾರಣ ಹೊಂಡ ಮುಚ್ಚಲು ಇದು ಸರಿಯಾದ ಸಮಯ. ಸಂಬಂಧಿತ ಇಲಾಖೆ ಈ ಸದಸ್ಯರ ಕೆಲಸವನ್ನು ನೋಡಿ ಕೇವಲ ಚಪ್ಪಾಳೆ ತಟ್ಟದೇ, ನಗರದ ಇತರ ಹೊಂಡಗಳನ್ನೂ ಶೀಘ್ರವಾಗಿ ಮುಚ್ಚುವ ಕಾರ್ಯ ಕೈಗೊಳ್ಳಬೇಕು. ಅನಾಹುತ ಅಥವಾ ಜೀವಹಾನಿ ಸಂಭವಿಸುವ ಮುನ್ನ ಕ್ರಮವಹಿಸಬೇಕು,” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





