ಶಿರಸಿ: ಮಲೆನಾಡು ಮತ್ತು ಕರಾವಳಿ ಭಾಗದ ಜನರನ್ನು ಪ್ರತಿ ವರ್ಷ ಭಯಕ್ಕೀಡು ಮಾಡುವ ಮಂಗನ ಕಾಯಿಲೆಗೆ (ಕೆಎಫ್ಡಿ) ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹೊಸದಾಗಿ ಮಂಗನ ಕಾಯಿಲೆ ಪರೀಕ್ಷಾ ಕೇಂದ್ರವನ್ನು (ಲ್ಯಾಬ್) ಅತಿ ಶೀಘ್ರದಲ್ಲೇ ತೆರೆಯಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈವರೆಗೆ ಮಂಗನ ಕಾಯಿಲೆಯ ಪರೀಕ್ಷೆಗಾಗಿ ಇಡೀ ರಾಜ್ಯ ಶಿವಮೊಗ್ಗದ ಕೇಂದ್ರವನ್ನೇ ನೆಚ್ಚಿಕೊಂಡಿತ್ತು. ಇದರಿಂದಾಗಿ ವರದಿ ಬರಲು ತಡವಾಗುತ್ತಿತ್ತು ಮತ್ತು ಅಲ್ಲಿನ ವೈದ್ಯರ ಮೇಲೂ ಕೆಲಸದ ಒತ್ತಡ ಹೆಚ್ಚಾಗುತ್ತಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ಈಗ ಶಿರಸಿಯಲ್ಲಿ ಎರಡನೇ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಹೊಸ ಕೇಂದ್ರಕ್ಕೆ ಬೇಕಾದ ಮೆಷಿನ್ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಆರೋಗ್ಯ ಇಲಾಖೆ ಈಗಾಗಲೇ ಖರೀದಿಸಿದೆ. ಕಟ್ಟಡ ಮತ್ತು ತಾಂತ್ರಿಕ ಸಿದ್ಧತೆಗಳು ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ಪರೀಕ್ಷೆಗಳು ಆರಂಭವಾಗಲಿವೆ. ಇದರಿಂದಾಗಿ ಕಾಡಿನ ಅಂಚಿನಲ್ಲಿ ವಾಸಿಸುವ ಜನರಿಗೆ ಕಾಯಿಲೆ ಬಂದ ತಕ್ಷಣ ಪತ್ತೆ ಹಚ್ಚಲು ಸುಲಭವಾಗಲಿದೆ.
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಿಂದ ಮಳೆಗಾಲ ಶುರುವಾಗುವ ತನಕ (ಜೂನ್) ಅರಣ್ಯ ಭಾಗದಲ್ಲಿ ಈ ಕಾಯಿಲೆಯ ಕಾಟ ಹೆಚ್ಚಿರುತ್ತದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದ ಜನರಲ್ಲಿ ರೋಗದ ಲಕ್ಷಣ ಕಂಡ ತಕ್ಷಣವೇ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಈ ಕೇಂದ್ರ ನೆರವಾಗಲಿದೆ.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?
ಇತ್ತೀಚೆಗೆ ಮಲೆನಾಡಿನ ಭಾಗದಲ್ಲಿ ನಡೆಸಿದ ತಪಾಸಣೆಯಲ್ಲಿ ಒಟ್ಟು 13 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿತ್ತು. ಆದರೆ ಇಲಾಖೆಯ ಸಮಯೋಚಿತ ಚಿಕಿತ್ಸೆಯಿಂದಾಗಿ ಎಲ್ಲರೂ ಗುಣಮುಖರಾಗಿದ್ದಾರೆ. ಈಗ ಶಿರಸಿಯಲ್ಲಿ ಹೊಸ ಕೇಂದ್ರ ಬರುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಧೈರ್ಯ ಬಂದಂತಾಗಿದೆ. ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಲಸಿಕೆ ನೀಡಲು ಇಲಾಖೆ ಸಂಪೂರ್ಣ ಸಜ್ಜಾಗಿದೆ.





