ಶಿರಸಿ: ಆಟವಾಡುತ್ತಾ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮನನ್ನ ಸಮಯಪ್ರಜ್ಞೆ ಮೆರೆದು ವ್ಯಕ್ತಿಯೊಬ್ಬರು ರಕ್ಷಿಸಿದ ಹೃದಯಸ್ಪರ್ಶಿ ಘಟನೆ ನಗರದ ಕಸ್ತೂರಬಾ ನಗರದಲ್ಲಿ ಇಂದು ನಡೆದಿದೆ.
ಪ್ರಾಣದ ಹಂಗು ತೊರೆದು ಬಾವಿಗಿಳಿದ ಪಯಾಜ್ ಚೌಟಿ ಎಂಬುವವರು ಮಗುವನ್ನು ಮೇಲಕ್ಕೆತ್ತುವ ಮೂಲಕ ಮಗುವಿಗೆ ಮರುಜನ್ಮ ನೀಡಿದ್ದಾರೆ.
ಘಟನೆಯ ವಿವರ: ಕಸ್ತೂರಬಾ ನಗರದ ನಿವಾಸಿಯಾದ ಪುಟ್ಟ ಬಾಲಕಿ ಭುವಿ (2) ಮನೆಯ ಆವರಣದಲ್ಲಿ ಆಟವಾಡುತ್ತಿದ್ದಳು. ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದ್ದಾರೆ. ಈ ವೇಳೆ ಮನೆಯ ಹಿಂಭಾಗದ ಬಾವಿಯಿಂದ ಮಗುವಿನ ಅಳುವಿನ ಧ್ವನಿ ಕೇಳಿಬಂದಿದೆ.
ತಕ್ಷಣ ಬಾವಿಯತ್ತ ಧಾವಿಸಿ ನೋಡಿದಾಗ, ಮಗು ಬಾವಿಯ ಒಳಗಿದ್ದ ಪಂಪ್ ಸೆಟ್ನ ಪೈಪ್ ಒಂದನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಾಪಾಯದಲ್ಲಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಕುಟುಂಬದವರ ಆಕ್ರಂದನ ಕೇಳಿ ಸ್ಥಳೀಯರು ಜಮಾಯಿಸಿದ್ದಾರೆ.
ಇದೇ ವೇಳೆ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಸಿದ್ಧರಾಗಿದ್ದ ಸಾರಿಕಾ ಸೇವಾ ಸಂಸ್ಥೆಯ ಸಂಸ್ಥಾಪಕ ಪಯಾಜ್ (ಪಯ್ಯು) ಚೌಟಿ ಅವರಿಗೆ ವಿಷಯ ತಿಳಿಯಿತು. ಒಂದು ಕ್ಷಣವೂ ವ್ಯರ್ಥ ಮಾಡದ ಪಯಾಜ್, ತಕ್ಷಣವೇ ಬಾವಿಯತ್ತ ಧಾವಿಸಿ. ಜನರ ನೆರವಿನೊಂದಿಗೆ ಬಾವಿಗಿಳಿದ ಅವರು, ಸುರಕ್ಷಿತವಾಗಿ ಮಗುವನ್ನು ಮೇಲೆ ತರುವಲ್ಲಿ ಯಶಸ್ವಿಯಾದರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | LPG ಸಿಲಿಂಡರ್ ಅಭಾವ; ಗೃಹಿಣಿಯರ ನೆಮ್ಮದಿಗೆ ಭಂಗ
ಸಾವಿನ ದವಡೆಯಿಂದ ಮಗುವನ್ನು ಪಾರು ಮಾಡಿದ ಪಯಾಜ್ ಅವರನ್ನು ಕಂಡು ಬಾಲಕಿಯ ಅಜ್ಜಿ ಭಾವುಕರಾದರು. “ನಮ್ಮ ಮಗುವನ್ನು ಉಳಿಸಿಕೊಟ್ಟ ಇವರೇ ನನ್ನ ಪಾಲಿನ ದೇವರು” ಎಂದು ಕೃತಜ್ಞತೆ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪಯಾಜ್ ಚೌಟಿ ಅವರು, “ಆ ಪರಿಸ್ಥಿತಿಯಲ್ಲಿ ಯಾರು ಬಿದ್ದಿದ್ದರೂ ನಾನು ಇದನ್ನೇ ಮಾಡುತ್ತಿದ್ದೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದೇ ನನಗೆ ತೃಪ್ತಿ ತಂದಿದೆ,” ಎಂದು ವಿನಯದಿಂದ ನುಡಿದರು. ಸಾಹಸ ಪ್ರವೃತ್ತಿ ಮೆರೆದ ಪಯಾಜ್ ಚೌಟಿ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.





